ಉಡುಪಿ: ಬಿಜೆಪಿ ಹಿರಿಯರ ಚಿಂತನೆ, ದೂರದರ್ಶಿತ್ವ ಮತ್ತು ಅವರು ಹಾಕಿ ಕೊಟ್ಟ ಮಾರ್ಗ ಇಂದು ಸರ್ವವ್ಯಾಪಿ ಆಡಳಿತದ ಮೂಲಕ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಭಾರತ ಮಾತೆ ಮತ್ತು ಪಕ್ಷದ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಇತರ ರಾಜಕೀಯ ಪಕ್ಷಗಳು ಕೇವಲ ಅಧಿಕಾರದ ಸ್ವಾರ್ಥ ರಾಜಕಾರಣ ಮತ್ತು ಕುಟುಂಬದ ಹಿತಕ್ಕೆ ಸೀಮಿತವಾಗಿದ್ದರೆ, ಬಿಜೆಪಿ ಅಂತ್ಯೋದಯ ಪರಿಕಲ್ಪನೆಯಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭ್ಯುದಯದ ಬಗ್ಗೆ ಚಿಂತನೆ ನಡೆಸುತ್ತಿದೆ. ರಾಷ್ಟ್ರೀಯ ವಿಚಾರಧಾರೆ, ದೇಶದ ಭದ್ರತೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಮರ್ಥ ಆಡಳಿತದ ಫಲವಾಗಿ ಭಾರತ ಇಂದು ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಬೆಳವಣಿಗೆ ಪಕ್ಷದ ರಾಜಕೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದರು.
ಬಿಜೆಪಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ವಿಧಾನಸಭಾ ಚುನಾವಣೆಗೆ ಸುಮಾರು 1 ತಿಂಗಳ ಅವಧಿ ಬಾಕಿ ಇರುವ ಸನ್ನಿವೇಶದಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಕಾರ್ಯ ಚಟುವಟಿಕೆಗಳು ಮತ್ತು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ದೊಡ್ಡ ಅಂತರದ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸುವ ಮೂಲಕ ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಜಯಿಸಿ ಮಗದೊಮ್ಮೆ ಬಿಜೆಪಿ ನೇತೃತ್ವದ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯಲು ಬದ್ಧತೆಯಿಂದ ಕೈಜೋಡಿಸಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಪರಿಶ್ರಮ, ತ್ಯಾಗ, ಬಲಿದಾನದ ಮೂಲಕ ವಿಶ್ವರೂಪಿಯಾಗಿ ಬೆಳೆದ ಬಿಜೆಪಿ ಇಂದು 10 ಕೋಟಿಗೂ ಮಿಕ್ಕಿ ಸದಸ್ಯರನ್ನೊಳಗೊಂಡಿರುವ ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷದ ಹಿರಿಯರ ‘ಏಕಾತ್ಮ ಮಾನವತಾವಾದ’ ತತ್ವದ ಮೂಲಕ ಬಿಜೆಪಿ ಯಾವ ಹಂತದಿಂದ ಇಂದು ಎಷ್ಟು ಎತ್ತರಕ್ಕೆ ವಿಸ್ತಾರವಾಗಿ ಬೆಳೆದಿದೆ ಎಂಬ ಅವಲೋಕನ ಮಾಡಬೇಕಿದೆ. ಸದೃಢ ಸಂಕಲ್ಪದಿಂದ ಗೆಲುವು ಸಾಧ್ಯ ಎಂಬುದನ್ನು ಬಿಜೆಪಿ ರುಜುವಾತುಪಡಿಸಿದೆ. ಬಿಜೆಪಿ ದೇಶದಲ್ಲಿ ಇನ್ನೂ ಕೆಲವು ರಾಜ್ಯಗಳನ್ನು ಗೆಲ್ಲಬೇಕಾಗಿದೆ. ಸಂಘಟಿತ ಪ್ರಯತ್ನದ ಮೂಲಕ ಮಗದೊಮ್ಮೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಆಡಳಿತದ ಸಂಕಲ್ಪದೊಂದಿಗೆ ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳು, ಜಿ.ಪಂ., ತಾ.ಪಂ. ಸಹಿತ ಎಲ್ಲಾ ಸ್ತರಗಳಲ್ಲಿ ಪಕ್ಷದ ಪೂರ್ಣ ಪ್ರಮಾಣದ ಗೆಲುವಿಗೆ ಕಾರ್ಯಕರ್ತರು ಹುಮ್ಮಸ್ಸಿನಿಂದ ತೊಡಗಿಸಿಕೊಳ್ಳಬೇಕು ಎಂದರು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ರಾಜ್ಯ, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ವಂದಿಸಿದರು.