News Karnataka Kannada
Saturday, May 04 2024
ಉಡುಪಿ

ಉಡುಪಿ: ಐತಿಹಾಸಿಕ ಒಳ ಮೀಸಲಾತಿ ಘೋಷಣೆಯಿಂದ ರಾಜ್ಯ ಸರಕಾರದ ಸಾಮಾಜಿಕ ನ್ಯಾಯದ ಬದ್ಧತೆ ಅನಾವರಣ

The historic announcement of internal reservation has exposed the state government's commitment to social justice.
Photo Credit : News Kannada

ಉಡುಪಿ: ರಾಜ್ಯದಲ್ಲಿ ಮೀಸಲಾತಿಯ ಸಂಬಂಧ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಅನಾವರಣಗೊಳಿಸಿದೆ. ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸಚಿವ ಸಂಪುಟವನ್ನು ಉಡುಪಿ ಜಿಲ್ಲಾ ಬಿಜೆಪಿ ಅಭಿನಂದಿಸುತ್ತದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯಾ ನಂತರ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅನೇಕ ಶಿಫಾರಸುಗಳನ್ನು ಮಾಡಲಾಗಿದ್ದು, ಇನ್ನೂ ಕೆಲವು ಅನುಷ್ಠಾನಕ್ಕೆ ಬಂದಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಅಸೆಂಬ್ಲಿಯಲ್ಲಿ ಕಾನೂನು ಮಾಡಿ ಅನುಷ್ಠಾನ ಮಾಡುತ್ತಿದೆ. ಅದೇ ಆಧಾರದಲ್ಲಿ ನೇಮಕಾತಿ ಮಾಡಲು ಸರಕಾರ ಮುಂದಾಗುತ್ತಿದೆ ಎಂದರು.

ಅದೇ ಆಧಾರದಲ್ಲಿ ಒಳ ಮೀಸಲಾತಿ ಬೇಕು ಎಂಬ ಬೇಡಿಕೆ ಇತ್ತು. ಎಸ್‍ಸಿಯಲ್ಲಿ 101 ಜಾತಿಗಳಿವೆ. ಇದರಿಂದ ಬಂಜಾರ, ಬೋವಿ, ಕೊರಚ, ಕೊರಮರನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡುತ್ತಾರೆ ಎನ್ನುವ ಆತಂಕ ಇತ್ತು. ಈ ವಿಚಾರವನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು, ಈ ಬಗ್ಗೆ ಪರಿಶೀಲಿಸಲು ಸಚಿವ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಉಪ ಸಮಿತಿ ಮಾಡಲಾಗಿತ್ತು. ಈಗಿರುವ ಎಸ್ಸಿ ಸಮುದಾಯದಲ್ಲಿ ಅವರವರ ಜನಸಂಖ್ಯೆಗೆ ಅನುಗುಣವಾಗಿ ಆರ್ಟಿಕಲ್ 341(2) ಪ್ರಕಾರ ನಾಲ್ಕು ವಿಭಾಗ ಮಾಡಲಾಗಿದೆ: 1) ಎಸ್ಸಿ ಎಡ – 6%, 2) ಎಸ್ಸಿ ಬಲ – 5.5%, 3) ಲಂಬಾಣಿ, ಭೋವಿ, ಕೊರಚ, ಕೊರಮ 4.5% 4) ಇತರರಿಗೆ ಶೇ.1ರಷ್ಟು ಶಿಫಾರಸು ಮಾಡಿದ್ದನ್ನು ಸರಕಾರ ಒಪ್ಪಿಕೊಂಡಿದೆ ಎಂದರು.

ಪ್ರವರ್ಗ 1ರಲ್ಲಿ 4%, ಪ್ರವರ್ಗ 2ಬಿ 4%, ಪ್ರವರ್ಗ 3ಬಿ 5% ಇದೆ. ಹಿಂದುಳಿದ ವರ್ಗದ ಪಟ್ಟಿಯನ್ನು ಪ್ರತಿ 10 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕೆಂಬ ನಿಯಮ ಇದೆ. ಹಿಂದುಳಿದ ವರ್ಗಗಳ ಆಯೋಗವನ್ನು ಸ್ವಾಯತ್ತ ಮಾಡಲಾಗಿದೆ. ಆಯೋಗ ನೀಡಿರುವ ಮಧ್ಯಂತರ ವರದಿಯನ್ನು ಸರಕಾರ ಒಪ್ಪಿಕೊಂಡಿದೆ ಎಂದರು.

ಈಗಿರುವ ಮೂರು ವರ್ಗಗಳನ್ನು ತೆಗೆದು ಎರಡೇ ವರ್ಗ ಮಾಡಲು ಸೂಚಿಸಿದಂತೆ ಅದನ್ನು ಪರಿಗಣಿಸಿ 3ಎ, 3ಬಿ ಯನ್ನು 2ಸಿ, 2ಡಿ ಮಾಡಲು ಆಯೋಗ ಶಿಫಾರಸು ಮಾಡಿದೆ ಎಂದು ಅವರು ತಿಳಿಸಿದರು.

ಆರ್ಥಿಕ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಕೆಲವರಿಗೆ ಅವಕಾಶ ಕೊಡಬಹುದು. ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂವಿಧಾನದಲ್ಲಿ ಯಾವುದೇ ಮೀಸಲಾತಿಗೆ ಅವಕಾಶ ಇಲ್ಲ ಎಂಬುದು ಡಾ! ಬಾಬಾಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ. ಆದರೆ, ಧಾರ್ಮಿಕ ಅಲ್ಪಸಂಖ್ಯಾತರನ್ನು ಕೈಬಿಡುವ ಬದಲು ಹಿಂದುಳಿದ ವರ್ಗದ ಪಟ್ಟಿಯಲ್ಲಿ ಆರ್ಥಿಕ ಮಿತಿಯಂತೆ ಅವರ ಶೇ.4% ರಿಂದ ಶೇ.10% ಆರ್ಥಿಕ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಲು ತೀರ್ಮಾನ ಮಾಡಲಾಗಿದೆ ಎಂದರು.

ಒಕ್ಕಲಿಗ ಸಮುದಾಯ 4 ರಿಂದ 6%, ಲಿಂಗಾಯತ ಸಮುದಾಯ 5 ರಿಂದ 7% ಆಗಿದೆ. ಪ್ರವರ್ಗ 1ನ್ನು ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೆಲವು ಹಿಂದುಳಿದ ವರ್ಗದಲ್ಲಿ ಹಲವಾರು ಸಮುದಾಯಗಳಿವೆ. ಅವುಗಳನ್ನು ಯಾವ ಪಟ್ಟಿಯಲ್ಲಿ ಸೆರಿಸಬೇಕು ಎಂಬುದನ್ನು ಮುಂದೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸರಕಾರ ಪ್ರಕಟಿಸಿದೆ. ಕೆಲವು ಸಮುದಾಯಗಳನ್ನು ಎಸ್ಸಿಗೆ ಸೇರಿಸಲು ಬೇಡಿಕೆ ಇದೆ. ಇದನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕಿದೆ. ಅದರ ಇಲಾಖೆಯ ಶಿಫಾರಸಿನಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದರು.

ಕಾಡುಗೊಲ್ಲರು, ಕೊಲಿ ಸಮುದಾಯಗಳ ಬೇಡಿಕೆಯನ್ನು ಕೇಂದ್ರಕ್ಕೆ ತಿಳಿಸಲು ರಾಜ್ಯ ಸರಕಾರ ಮುಂದಾಗಿದೆ. 2ಎ ಯಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇರುವುದಿಲ್ಲ. ಅದರ ಹೊರತಾಗಿ ಹೆಚ್ಚಳ ಮಾಡಲಾಗಿದೆ ಎಂದರು.

ಪಿಂಜಾರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಲು ತೀರ್ಮಾನ ಪ್ರಕಟಿಸಲಾಗಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ದಿಟ್ಟ ಜನಪರ ನಿರ್ಧಾರ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳ ನಿದ್ದೆಗೆಡಿಸಿದೆ. ನಿರಂತರವಾಗಿ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನೇ ಮಾಡುತ್ತಾ ಬಂದಿರುವ ಕಾಂಗ್ರೆಸ್ ಹಿಂದುಳಿದ ವರ್ಗಗಳಿಗೆ ನೀಡಿರುವ ಸಾಮಾಜಿಕ ನ್ಯಾಯವನ್ನು ಕೇವಲ ಚುನಾವಣೆಯ ಕಾರಣಕ್ಕಾಗಿ ವಿರೋಧಿಸುತ್ತಿದೆ. ತಮ್ಮ ಆಡಳಿತಾವಧಿಯಲ್ಲಿ ಸಾಧಿಸಲಾಗದ ಐತಿಹಾಸಿಕ ನಿರ್ಣಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಕೈಗೊಂಡಿರುವುದನ್ನು ಸಹಿಸದ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುತ್ತಿವೆ ಎಂದು ಅವರು ತಿಳಿಸಿದರು.

ಈಗಾಗಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಮಗದೊಮ್ಮೆ ಬಿಜೆಪಿ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ. ವಿಜಯ ಸಂಕಲ್ಪ ಯಾತ್ರೆ ಸಹಿತ ವಿವಿಧ ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಗಳನ್ನು ಜನಮಾನಸಕ್ಕೆ ತಲುಪಿಸಲಾಗಿದೆ. ರಾಜ್ಯದಾದ್ಯಂತ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವಿದೆ ಎಂದರು.

ಕಾಂಗ್ರೆಸಿಗರ ಹಗಲುಗನಸು ಕೇವಲ ಕನಸಾಗಿಯೇ ಉಳಿಯಲಿದೆ. ಒಳ ಮೀಸಲಾತಿ ಸಂಬಂಧ ರಾಜ್ಯ ಬಿಜೆಪಿ ಸರಕಾರ ಕೈಗೊಂಡ ನಿರ್ಧಾರ ಜನತೆಯ ಅಭ್ಯುದಯಕ್ಕೆ ನಾಂದಿ ಹಾಡಲಿದೆ. ಈ ಆದೇಶವನ್ನು ರದ್ದು ಮಾಡುವ ಯಾವುದೇ ಅವಕಾಶ ಕಾಂಗ್ರೆಸ್ ಮುಖಂಡರಿಗೆ ಸಿಗಲು ಸಾಧ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡಿಗೆ ರಾಜ್ಯದ ನಾಯಕರ ಮೇಲೆ ವಿಶ್ವಾಸವೇ ಇಲ್ಲದ ಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಬದಲಾವಣೆಗೆ ಸೂಚನೆ ನೀಡಿದೆ. ಕಾಂಗ್ರೆಸ್ಸಿಗೆ ಚುನಾವಣೆಗೆ ತೆರಳಲು ಯಾವುದೇ ವಿಷಯಗಳೇ ಇಲ್ಲದೆ ಹತಾಶ ಸ್ಥಿತಿಯಲ್ಲಿದೆ.

ಸೋಲಿನ ಬೀತಿಯಿಂದ ಸದಾ ಸುಳ್ಳು ಸುದ್ದಿಗಳನ್ನು ಬಿತ್ತರಿಸುವ ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಂತಿದೆ. ಕೇಂದ್ರದಿಂದ ಬರುವ ನಾಯಕರಿಂದ ಪಕ್ಷಕ್ಕೆ ಅಪಾರ ಹಾನಿಯಾಗಬಹುದೆಂಬ ವಾಸ್ತವ ಕಾಂಗ್ರೆಸ್ಸಿನ ಅರಿವಿನಲ್ಲಿದೆ. ಆದರೆ ಬಿಜೆಪಿ, ವಿಶ್ವವಂದ್ಯ ನಾಯಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ನಾಯಕರ ಮಾರ್ಗದರ್ಶನ ಹಾಗೂ ರಾಜ್ಯದ ಸಮರ್ಥ ನಾಯಕತ್ವದೊಂದಿಗೆ ಚುನಾವಣೆಗೆ ಸುಸಜ್ಜಿತಗೊಂಡಿದೆ. ಮಗದೊಮ್ಮೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು ಜನಪರ, ಅಭಿವೃದ್ಧಿ ಪರ ಆಡಳಿತ ನಡೆಸಲಿದೆ ಎಂದು ಕಿಣಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾದ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು