ಉಡುಪಿ: ಡಿ 10 ರಂದು ಪ್ರಕೃತಿ ಸಮೂಹ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾ ಕೂಟವನ್ನು ಅತ್ಯಂತ ವೈಭದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್. ನಾಗೇಶ್ ಹಾಗೂ ಗೌರವ ಅತಿಥಿಗಳಾಗಿ ಮೇಲ್ವಿನ್ ಅವರು ಆಗಮಿಸಿದ್ದರು. ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜೆರಾಲ್ಡ್ ಕ್ರಾಸ್ಟರವರು ಉಪಸ್ಥಿತರಿದ್ದು, ಕ್ರೀಡಾ ಜ್ಯೋತಿಯನ್ನು ಬೆಳಗುವುದರ ಮೂಲಕ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್. ನಾಗೇಶ್ ರವರು ವಿದ್ಯಾರ್ಥಿಗಳು ಕೇವಲ ಪುಸ್ತಕ ಗಳನ್ನು ಓದಿ ಅಂಕಗಳನ್ನು ಗಳಿಸುವುದು ಮುಖ್ಯವಲ್ಲ ಕ್ರೀಡೆಯಲ್ಲಿ ಕೂಡ ಭಾಗವಹಿಸುವುದು ಮತ್ತು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಅತಿ ಮುಖ್ಯ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಆಗಮಿಸಿದ ಮೇಲ್ವಿನ್ ರವರು ಕ್ರೀಡೆಗಳಲ್ಲಿ ಗೆಲುವೇ ಮುಖ್ಯವಲ್ಲ ಭಾಗವಹಿಸುವಿಕೆಯು ಮುಖ್ಯವೆಂಬುದನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪದ್ಮನಾಭ ಗೌಡರವರ ಆಟೋಟಗಳಿಂದಾಗುವ ಲಾಭಗಳನ್ನು ಕುರಿತು ಮನಮುಟ್ಟುವಂತೆ ತಿಳಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳು ಕೈಗೊಂಡ ಡ್ರಿಲ್ ಶೋ ಪ್ರದರ್ಶನ ಆಕರ್ಷಕವಾಗಿದ್ದಿತು . ಪೂರ್ವಭಾವಿಯಾಗಿ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.
ಆಡಳಿತ ನಿರ್ದೇಶಕರಾದ ಅಶೋಕ್ ಕುಮಾರ, ಆಡಿಳಿತಾಧಿಕಾರಿ ಕುಮಾರಿ ಮಮತ ಶರ್ಮ ರವರು ,ಪ್ರಕೃತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆಯಾದ ಕುಮಾರಿ ವಿನ್ಯಾ ರವರು ಉಪಸ್ಥಿತರಿದ್ದರು.
ಹತ್ತನೆಯ ತರಗತಿಯ ವಿದ್ಯಾರ್ಥಿಯಾದ ಆದಿತ್ಯ ಕಾರ್ಯಕ್ರಮವನ್ನು ನಿರೂಪಿಸಿ,ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆಯಾದ ಕುಮಾರಿ ವಿನ್ಯಾ ರವರು ಸ್ವಾಗತಿಸಿ, ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಸಾದ್ ರವರು ಎಲ್ಲಾರಿಗೂ ವಂದಿಸಿದರು.