ಪರ್ಕಳದ ಮಾರ್ಕೆಟ್ ಬಳಿ ನಗರಸಭೆಗೆ ಸೇರಿದ ಕಟ್ಟಡದಲ್ಲಿರುವ ಪ್ರಕಾಶ್ ಲಾಂಡ್ರಿಯ ಬಳಿ ಬಲು ಅಪರೂಪದ ಹಾರುವ ಹಾವು ಕಾಣಿಸಿಕೊಂಡಿದೆ.
ಹಾವು ಸುಮಾರು ಎರಡೂವರೆ ಫೀಟ್ ಉದ್ದವಿದ್ದು, ಇದರ ದೇಹ ಕಪ್ಪು ಮತ್ತು ಹಳದಿ ಬಣ್ಣದ ಗೆರೆಗಳಿಂದ ಕೂಡಿದೆ. ಮರದಿಂದ ಒಮ್ಮೇಲೆ ಕೆಳಗೆ ಜಿಗಿದ ಹಾವನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದರು.
ಅಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಅವರು, ತಕ್ಷಣವೇ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿದರು.
ಇದೊಂದು ವಿಷ ರಹಿತ ಹಾವು. ಕ್ರಿಸೊಪೆಲಿಯಾ ಒರ್ನಾಟಾ ಇದರ ವೈಜ್ಞಾನಿಕ ಹೆಸರಾಗಿದ್ದು, ಇದನ್ನು ಕನ್ನಡದಲ್ಲಿ ಹಾರುವ ಹಾವು ಎಂದು ಕರೆಯುತ್ತಾರೆ. ಇದು ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹಾವು ಕಂಡಾಗ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು ಗುರುರಾಜ್ ಸನಿಲ್ ತಿಳಿಸಿದ್ದಾರೆ.
ಗಣೇಶ್ ರಾಜ್ ಸರಳೇಬೆಟ್ಟು ಅವರು ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು. ಈ ಸಂದರ್ಭದಲ್ಲಿ ಹರೀಶ್ ಮಡಿವಾಳ, ಸದಾಶಿವ ಮಡಿವಾಳ, ಶಿವರಾಂ ಪೂಜಾರಿ, ಜಯಂತ್ ಟೈಲರ್ ಸಹಕರಿಸಿದರು.