ಉಡುಪಿ: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಆಯ್ದ ಸುಮಾರು 117 ಕನ್ನಡ ಕತೆಗಾರರ ವಿವಿಧ ಕತೆಗಳ ಬೃಹತ್ ಕೃತಿ ‘ನೂರಾರು ಲೇಖಕರ ನೂರಾರು ಕತೆಗಳು’ ಬಿಡುಗಡೆ ಕಾರ್ಯಕ್ರಮ ನಗರದ ಕಿದಿಯೂರು ಹೋಟೆಲ್ ಪವನ್ ರೂಫ್ ಟಾಪ್ ಸಭಾಂಗಣದಲ್ಲಿ ಇಂದು ನಡೆಯಿತು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಜೋಗಿ ಅವರು, ಕಥೆಗಾರರ ಬೆಳೆಯಬೇಕಾದರೆ ಶೋಕಿಗಿಂತ ಮೀರಿದ ಗುಣ ಇರಬೇಕು. ಕಥೆ ಬರೆಯುವುದು ನಿರಂತರವಾದ ಕ್ರಿಯೆ. ಕಥೆಗಳಿಂದ ಮನುಷ್ಯನ ಒಳಮನಸ್ಸನ್ನು ಅರಿಯಲು ಸಾಧ್ಯವಿದೆ. ಜಗತ್ತು ಕಥೆಗಾರರಿಗೆ ಮತ್ತು ಕವಿಗಳಿಗೆ ಹೆದರುತ್ತದೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ವಸಂತ ಗಿಳಿಯಾರು ಪುಸ್ತಕದ ಕುರಿತು ಮಾತನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್, ಸಂಚಾಲಕ ರವಿರಾಜ್ ಎಚ್. ಪಿ ಉಪಸ್ಥಿತರಿದ್ದರು. ಲೇಖಕರಾದ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು, ಮರವಂತೆ ನಾಗರಾಜ್ ಹೆಬ್ಬಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.