ಉಡುಪಿ: 45 ದಿನಗಳ ಹಿಂದೆ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟು ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿರುವ ಆಂಧ್ರ ಮೂಲದ 29ವರ್ಷದ ಅನು ಎಂಬ ಮಹಿಳೆಯ ವಾರಸುದಾರರು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಆಕೆಯನ್ನು ತಾತ್ಕಾಲಿಕವಾಗಿ ಮಂಜೇಶ್ವರದ ಸ್ನೇಹಾಲಯಕ್ಕೆ ವಿಶು ಶೆಟ್ಟಿ ದಾಖಲಿಸಿದ್ದಾರೆ.
ಮಹಿಳೆಗೆ 45 ದಿನಗಳ ಕಾಲ ಚಿಕಿತ್ಸೆ ನೀಡಿ ಬಾಳಿಗಾ ಆಸ್ಪತ್ರೆ ವಿಶೇಷ ರಿಯಾಯಿತಿ ಸೇವೆ ನೀಡಿ ಸಹಕರಿಸಿದೆ.ಚಿಕಿತ್ಸೆ ವೆಚ್ಚ, ಔಷಧಿ, ಊಟೋಪಚಾರ ಹಾಗೂ ಮಂಜೇಶ್ವರಕ್ಕೆ ಪ್ರಯಾಣ ವೆಚ್ಚ ಎಲ್ಲಾ ಸೇರಿ ಸುಮಾರು 27,500 ರೂ.ಗಳಾಗಿದ್ದು, ನಿವೃತ್ತ ಬ್ಯಾಂಕ್ ಮಹಿಳಾಧಿಕಾರಿ 10,000 ರೂ., ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಸದಾನಂದ ಶೆಟ್ಟಿ ಅಂಬಲಪಾಡಿ 10,000 ರೂ., ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಸತೀಶ್ ಶೆಟ್ಟಿ ಅಂಬಲಪಾಡಿ ಅವರು 5,000ರೂ. ನೀಡಿದ್ದು, ಉಳಿದ ಮೊತ್ತವನ್ನು ವಿಶು ಶೆಟ್ಟಿ ಭರಿಸಿದ್ದಾರೆ.
ಮಹಿಳೆ ತನ್ನ ಕುಟುಂಬವನ್ನು ಸೇರಲು ಹಂಬಲಿಸುತ್ತಿದ್ದು, ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿ ವಹಿಸಬೇಕು ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.