ಉಡುಪಿ: ವಿಧಾನಸಭಾ ಕ್ಷೇತ್ರದಲ್ಲಿ ಮೀನುಗಾರ ಸಮುದಾಯದ ಯುವ ಮುಖಂಡ, ಉದ್ಯಮಿ ಪ್ರಸಾದ್ ಕಾಂಚನ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಇದರಿಂದ ಟಿಕೆಟ್ ವಂಚಿತರು ಆಕ್ರೋಶಗೊಂಡಿದ್ದಾರೆ.
ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ , ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ದಿವಾಕರ್ ಕುಂದರ್ ಸಹಿತ ಏಳು ಮಂದಿ ಆಕಾಂಕ್ಷಿಗಳು ಉಡುಪಿ ಕ್ಷೇತ್ರದ ಟಿಕೆಟ್ ಅರ್ಜಿ ಹಾಕಿದ್ದರು. ಆದರೆ ಕೊನೆಗೆ ಉಡುಪಿ ಟಿಕೆಟ್ ಪ್ರಸಾದ್ ಕಾಂಚನ್ ಪಾಲಾಗಿದೆ. ಇದು ಬಹುತೇಕ ಆಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ಚಟುವಟಿಕೆಯಲ್ಲಿ ಪ್ರಸಾದ್ ಕಾಂಚನ್ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ .ಮತ್ತೋರ್ವ ಪ್ರಬಲ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಅವರು ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.
ಒಟ್ಟಾರೆ ಉಡುಪಿ ಕ್ಷೇತ್ರದಾದ್ಯಂತ ಕಾರ್ಯಕರ್ತರು ಈ ಬೆಳವಣಿಗೆಯಿಂದ ಭ್ರಮನಿರಶನಗೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಮತ್ತು ಮುಖಂಡರ ಆಕ್ರೋಶ ಎಷ್ಟರ ಮಟ್ಟಿಗೆ ಸ್ಫೋಟಗೊಳ್ಳಲಿದೆ ಎಂಬುವುದನ್ನು ಕಾದುನೋಡಬೇಕಿದೆ.