ಉಡುಪಿ: ವೇದ ಉಪನಿಷತ್ತುಗಳ ಕಾಲದಲ್ಲೂ ಪ್ರಜಾಪ್ರಭುತ್ವ ಇತ್ತು ಎಂಬ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಖಂಡಿಸಿ ಉಡುಪಿ ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರಕಾರದ ವಿರುದ್ಧ ದಿಕ್ಕಾರ ಕೂಗಿದ ಪ್ರತಿಭಟನಾಕಾರರು ಸುತ್ತೋಲೆಯ ಪ್ರತಿಯನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಉಡುಪಿ ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಸಂಚಾಲಕ ಜಯನ್ ಮಲ್ಪೆ ಮಾತನಾಡಿ, ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಇಂದು ಪ್ರಜಾಪ್ರಭುತ್ವದ ಸುಳ್ಳು ಸುತ್ತೋಲೆಗಳನ್ನು ಹೊರಡಿಸಿ ಸಂವಿಧಾನವನ್ನು ನಾಶ ಮಾಡುವ ಸಂಚು ನಡೆಯುತ್ತಿದೆ. ಕೇಂದ್ರ ಸರಕಾರ ಜನವಿರೋಧಿ ನೀತಿಯ ಜೊತೆಗೆ ಜನರ ಬದುಕಿನಲ್ಲಿ ಕೂಡಾ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಕೇಂದ್ರ ಸರಕಾರದ ಪುರಾತತ್ವ ಶಾಸ್ತ್ರ ವಿಭಾಗ ಮತ್ತು ಯುಜಿಸಿ ವಿವಾದಾತ್ಮಕ ಸುತ್ತೋಲೆ ಹೊರಡಿಸಿದೆ. ಇದು ದೇಶದ ನೈಜ್ಯ ಇತಿಹಾಸವನ್ನು ತಿರುಚುವ ಹಾಗೂ ಅಂಬೇಡ್ಕರ್ ಅವರು ಸಂವಿಧಾನಕ್ಕೆ ನೀಡಿರುವ ಕೊಡುಗೆಗಳ ಪ್ರಭಾವವನ್ನು ಕಡಿಮೆ ಮಾಡುವ ಷಡ್ಯಂತ್ರದ ಭಾಗ ಆಗಿದೆ ಎಂದು ಕಿಡಿಕಾರಿದರು.
ಸಂಚಾಲಕರಾದ ಸುಂದರ್ ಮಾಸ್ತರ್, ಶಾಮ್ ರಾಜ್ ಬಿರ್ತಿ,ಹರೀಶ್ ಮಲ್ಪೆ, ವಾಸುದೇವ ಮುದ್ದೂರು, ರಮೇಶ್ ಕೋಟ್ಯಾನ್, ಶೇಖರ್ ಹೆಜಮಾಡಿ, ಪರಮೇಶ್ವರ ಉಪ್ಪೂರು, ದಯಾನಂದ ಕಪ್ಪೆಟ್ಟು, ಆನಂದ ಬ್ರಹ್ಮಾವರ, ವಿಶ್ವನಾಥ್ ಬೆಳ್ಳಂಪಳ್ಳಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.