ಕುಡಿಯುವ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿ ಪಂಪ್ ನಿರ್ವಾಹಕನೋರ್ವ ಗ್ರಾಪಂ ಸದಸ್ಯನಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಘಟನೆ ಚೇರ್ಕಾಡಿ ಗ್ರಾಮದಲ್ಲಿ ನಡೆದಿದೆ.
ಚೇರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ನವೀನ ಬಂಗೇರ ಅವರ ಮೇಲೆ ಹಲ್ಲೆ ನಡೆದಿದೆ. ಸಮರ್ಪಕವಾಗಿ ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನವೀನ್ ಬಂಗೇರ ಅವರಿಗೆ ದೂರು ನೀಡಿದ್ದರು. ಅದರಂತೆ ಪಂಚಾಯತ್ ನಲ್ಲಿ ನೀರು ಸರಬರಾಜು ಮಾಡುವ ಪಂಪ್ ನಿರ್ವಾಹಕ ಜಗದೀಶ ಆಚಾರ್ಯ ಎಂಬಾತ ಬಳಿ ವಿಚಾರಿಸಿದ್ದಾರೆ.
ಈ ವೇಳೆ ಆತ ಏಕಾಏಕಿಯಾಗಿ ಉದ್ದವಾದ ಸ್ಪಾನರ್ ಅನ್ನು ಹಿಡಿದುಕೊಂಡು ಬಂದು ನವೀನ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಅಲ್ಲದೆ ಕೆಟ್ಟ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ನವೀನ ಬಂಗೇರ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.