ಕಾರ್ಕಳ: ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕ ಶಕ್ತಿಯನ್ನು ಮೀರಿದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆ ಶ್ಲಾಘನೀಯ. ಉಡುಪಿ, ಮಂಗಳೂರಿನಲ್ಲಿ ಆರಂಭವಾದ ಸ್ವ ಸಹಾಯ ಸಂಘಗಳ ಕಾರ್ಯಚಟುವಟಿಕೆ ರಾಜ್ಯದ 9 ಜಿಲ್ಲೆಗಳಿಗೆ ವಿಸ್ತರಿಸಿರುವುದು ಅಭಿನಂದಾನಾರ್ಹ ಎಂದು ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅವರು ಮಾ. 24 ರಂದು ಮಂಗಳೂರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೋದಯ ಗುಂಪಿನ ಸದಸ್ಯರಿಗೆ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ತನ್ನ ಜನಪರ ಕಾರ್ಯಚಟುವಟಿಕೆಗಳ ಮೂಲಕ ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಗುರುತಿಸಿಕೊಂಡಿರುವ ರಾಜೇಂದ್ರ ಕುಮಾರ್ ಅವರ ಸ್ವ ಸಹಾಯ ಸಂಘಗಳ ಪರಿಕಲ್ಪನೆಯು ಮಹಿಳೆಯರಿಗೆ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಉತ್ತಮ ತಳಹದಿಯಾಗಿದೆ. ನವೋದಯ ಗುಂಪುಗಳು ಸಾಲ ಒದಗಿಸುವಿಕೆ, ಸಾಲ ವಸೂಲಾತಿಗೆ ಮಾತ್ರ ಸೀಮಿತವಾಗದೆ ಆರೋಗ್ಯ ಭದ್ರತೆ, ಉದ್ಯೋಗವಕಾಶ, ಅಪಘಾತ ವಿಮೆ ಹೀಗೆ ಸ್ವಾವಲಂಬಿ ಜೀವನಕ್ಕೆ ಬೇಕಾದ ಅವಕಾಶಗಳನ್ನು ಒದಗಿಸಿರುವುದು ಸ್ತುತ್ಯಾರ್ಹ. ಅಭಿವೃದ್ಧಿಯ ವಿಚಾರದಲ್ಲಿ ಸರಕಾರದ ಜೊತೆ ನವೋದಯದಂತ ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಮಹಿಳೆಯರಲ್ಲಿ ಅಭಿವೃದ್ಧಿಪರ ಚಿಂತನೆ ಹಾಗೂ ಜವಾಬ್ದಾರಿಯುತ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ 24 ವರ್ಷಗಳ ಹಿಂದೆ ಈ ಸಂಘಟನೆಯನ್ನು ನಿರ್ಮಾಣ ಮಾಡಿದ್ದು, ಇದೀಗ ಮಹಿಳಾ ಸಬಲೀಕರಣ ಹಾಗೂ ಸ್ವಾವಲಂಬಿ ಬದುಕಿನೊಂದಿಗೆ ನವೋದಯದ ಹಿಂದಿನ ಉದ್ದೇಶ ಸಾರ್ಥಕಗೊಂಡಿದೆ ಎನ್ನಲು ಹೆಮ್ಮೆಯಾಗುತ್ತದೆ. ಸಮಾಜಮುಖಿ ಚಟುವಟಿಕೆಗಳೊಂದಿಗೆ ಮನೆಯ ಕೆಲಸ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆಯರು ಸಮಾಜಕ್ಕೆ ಮಾದರಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಈ ಸಂದರ್ಭ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ವಾದಿರಾಜ ಶೆಟ್ಟಿ, ಜಲದುರ್ಗಾ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಘವ್ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಭಾಸ್ಕರ್ ಕೋಟ್ಯಾನ್ ಸ್ವಾಗತಿಸಿದರು. ರಾಜೇಂದ್ರ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ವಂದಿಸಿದರು.