ಕಾರ್ಕಳ: ಶಾಲಾ ಆವರಣದಲ್ಲಿ ಸುತ್ತಮುತ್ತ ಯಾವುದೇ ರೀತಿಯ ಮದ್ಯಪಾನ ಅಥವಾ ಧೂಮಪಾನ ಸೇರಿದಂತೆ ಮಾದಕ ವಸ್ತು ಸೇವನೆಗೆ ಅಥವಾ ಮಾರಾಟಕ್ಕೆ ನಿರ್ಬಂಧ ವಿಧಿಸಿದೆ ಎಂಬುವುದು ಸರಕಾರದ ಕಾನೂನಿನಲ್ಲಿ ಅಡಕವಾಗಿರುವ ಮಹತ್ವದ ವಿಚಾರಗಳಲ್ಲಿ ಒಂದಾಗಿದೆ.
ಸರಕಾರದ ಕಾನೂನು, ನಿಯಾಮಾವಳಿ ಎಂಬುವುದು ಕೇವಲ ಕಡತಕ್ಕೆ ಸೀಮಿತವಾಗಿರಬಾರದು. ಅಥವಾ ಬಡವನ ಮೇಲೆ ಬಿಡುವ ಬ್ರಹ್ಮಾಸ್ತ್ರವಾಗಲೇ ಬಾರದು. ಎಲ್ಲರಿಗೂ ಒಂದೇ ಕಾನೂನು ಈ ದೇಶದ ಪ್ರಜೆಗಳಿಗಾಗಬೇಕು. ಆದರೆ….ಬಜಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅದರದೇ ಆದಂತಹ ಚರಿತ್ರೆ ಇದೆ. ಇಲ್ಲಿ ವಿದ್ಯಾರ್ಜನೆಗೈದ ಅದೆಷ್ಟೋ ಮಂದಿ ದೇಶ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಬಜಗೋಳಿ- ಹೊಸ್ಮಾರು ರಾಜ್ಯ ಹೆದ್ದಾರಿಯ ಎಡಬದಿಯಲ್ಲಿ ವಿದ್ಯಾ ಸಂಸ್ಥೆ ಇದ್ದರೆ, ರಸ್ತೆಯ ಬಲಭಾಗದಲ್ಲಿ ನಿರ್ಮಾಣವಾದ ನೂತನ ಕಟ್ಟಡದಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ತೆರೆಯುವುದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ಇಲಾಖೆಯಿಂದಲೂ ಅದಕ್ಕೆ ಅನುಮತಿ ಲಭಿಸಿದೆ. ಇದರ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹೆತ್ತವರು, ಊರ ಪ್ರಜ್ಞಾವಂತ ನಾಗರಿಕರು ಹಾಗೂ ಶಿಕ್ಷಕ ವರ್ಗದವರು ಇಲಾಖೆಯ ಕ್ರಮವನ್ನು ಖಂಡಿಸಿ ಹೋರಾಟದ ಹಾದಿಗೆ ದುಮ್ಮುಕಿದ್ದಾರೆ.
ಮಾಹಿತಿ ಪ್ರಕಾರ ಶಿಕ್ಷಣ ಸಂಸ್ಥೆಯ ಅನತಿ ದೂರದಲ್ಲಿ ಬಾರ್ ಎಂಡ್ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ ಈಗಾಗಲೇ ಸಭೆಯನ್ನು ಆಯೋಜಿಸಿ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಅದರಂತೆ ಆಗಸ್ಟ್ 15ರಂದು ಶಾಲಾ ಎದುರಿನಲ್ಲಿಯೇ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರ ವನ್ನು ಮುಂದಿಟ್ಟು ಪುಟಾಣಿ ವಿದ್ಯಾರ್ಥಿಗಳು ಭಿತ್ತಿಪತ್ರ ಹಿಡಿದು ಧರಣಿಯಲ್ಲಿ ಪಾಲ್ಗೊಂಡಿದ್ದರು. ಆ ಮೂಲಕ ಮೊದಲ ಹಂತದಲ್ಲಿ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸುವ ಕಾರ್ಯವನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಿದ್ದಾರೆ.