ಉಡುಪಿ: ಮಾಜಿ ಪ್ರಧಾನಿ ಮಂತ್ರಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಪ್ರಯುಕ್ತ ನಗರದ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರೊಂದಿಗೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಹಾಗೂ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅವರು “ಬಾನಿಗೊಂದು ಎಲ್ಲೆ ಎಲ್ಲಿದೆ” ಹಾಡಿಗೆ ಧ್ವನಿಗೂಡಿಸುವ ಮೂಲಕ ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದರು. ಶಾಸಕ ರಘುಪತಿ ಭಟ್ ಹಾಗೂ ವಿಜಯ ಪ್ರಕಾಶ್ ಅವರ ಜುಗಲ್ ಬಂಧಿಗೆ ಪ್ರೇಕ್ಷಕರು ಶಿಳ್ಯೆ, ಚಪ್ಪಾಳೆ ಮೂಲಕ ಹುರಿದುಂಬಿಸಿದರು.
ನಗರದಲ್ಲಿ ಹಡಿಲು ಭೂಮಿ ಕೃಷಿ ಯೋಜನೆಗೆ ಗಾಯಕ ವಿಜಯಪ್ರಕಾಶ್ ಮೆಚ್ಚುಗೆ
ಕೇದಾರೋತ್ಥಾನ ಟ್ರಸ್ಟ್ ಮೂಲಕ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಯೋಜನೆಯ ಬಗ್ಗೆ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರಘುಪತಿ ಭಟ್ ಅವರು ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹಡಿಲು ಭೂಮಿ ಕೃಷಿ ಯೋಜನೆಯನ್ನು ಕಾರ್ಯಗತಗೊಳಿಸುವ ಮೂಲಕ ಯಾವುದೇ ಭೂಮಿ ವ್ಯರ್ಥ ಅಲ್ಲ. ಸಾಧಿಸುವ ಚಲ ಇದ್ದರೆ, ಮರುಭೂಮಿಯಲ್ಲೂ ಕೃಷಿ ಮಾಡಬಹುದು ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ. ಶಾಲಾ ಮಕ್ಕಳನ್ನು ಹಡಿಲು ಭೂಮಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರಿಗೂ ಕೃಷಿಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ದಾರೆ ಎಂದರು.