ಪಡುಬಿದ್ರಿ: ಶ್ರೀ ಕಟೀಲು ಮೇಳದ ಹಿರಿಯ ಕಲಾವಿದ,ಪ್ರಬಂಧಕ, ಅರ್ಥಧಾರಿ, ವಾಗ್ಮಿ ಸುಣ್ಣoಬಳ ವಿಶ್ವೇಶ್ವರ ಭಟ್ ಹಾಗೂ ಖ್ಯಾತ ಹಾಸ್ಯಗಾರ ಮವುವಾರು ಬಾಲಕೃಷ್ಣ ಮಣಿ ಯಾಣಿ ಅವರಿಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಬಳಿ ನಡೆದ ಕಟೀಲು ಯಕ್ಷಗಾನ ಮೇಳದ ಸೇವೆ ಆಟದಲ್ಲಿ ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲ್ಲಟೆ ಗುತ್ತು ಮೂಲ ಕುಟುಂಬಸ್ಥರಾದ ಎರ್ಮಾಳು ರಾಧಾ ವಿಠ್ಠಲ ಶೆಟ್ಟಿ ಹಾಗೂ ಮಕ್ಕಳು ಕಂಬಳ ಕ್ಷೇತ್ರದಲ್ಲಿ ಕೋಣಗಳ ಯಜಮಾನರಾಗಿ ಖ್ಯಾತಿ ಪಡೆದಿದ್ದ ಮುಂಬೈ ಘಾಟ್ ಕೋಪರ್ ನ ಭಾರತ್ ಕೆಫೆಯ ಸಂಸ್ಥಾಪಕ ಎರ್ಮಾಳ್ ಪೂಲ ವಿಠ್ಠಲ ಶೆಟ್ಟಿ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಿದರು.
ಕಟೀಲು ದೇವಸ್ಥಾನ ದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಶ್ರಣ್ಣ ಅವರು ” ಕಟೀಲು ಮೇಳ ಒಂದರಲ್ಲಿಯೇ ಕಳೆದ ನಲ್ವತ್ತು ವೇಷಗಳಿಂದ ನಿರಂತರ ಕಲಾ ಸೇವೆ ಮಾಡುತ್ತಿರುವ ಸುನ್ನಂಬಳ ಅವರ ಕಲಾಯಾನದ ಮೇಲ್ಮೆಯನ್ನು ಹಾಗೂ ರಾಜ ಹಾಸ್ಯದ ಪ್ರತಿನಿಧಿ ಯಂತೆ ರಂಗ ಸ್ಥಳದಲ್ಲಿ ಮೆರೆಯುವ ಮಣಿಯಾಣಿಯವರ ಹಾಸ್ಯದ ಓಘವನ್ನು ಕೊಂಡಾಡಿದರು.
ರಿಬ್ಬನ್ಸ್ ಅಂಡ್ ಬಲೂನ್ಸ್ ಸಂಸ್ಥಾಪಕ ಎರ್ಮಾಳ್ ಸತೀಶ್ ಶೆಟ್ಟಿ ಅವರು ನಿರಂತರವಾಗಿ ಇಪ್ಪತಾರನೆಯ ವರ್ಷದ ತಮ್ಮ ಕುಟುಂಬದ ಸೇವೆ ಆಟಕ್ಕೆ ಆಗಮಿಸಿ ಹರಸಿದ ಆಶ್ರಣ್ಣರನ್ನು ಗೌರವಿಸಿದರು. ಐಕಳ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿದರು. ಎರ್ಮಾಳ್ ಹೊಸಮನೆ ಕಮಲ ನಿವಾಸ ಉದಯಶೆಟ್ಟಿ, ರಾಜೇಶ್ ಶೆಟ್ಟಿ ವಿಶು ಕುಮಾರ್ ಉಚ್ಚಿಲ್ ಉಪಸ್ಥಿತರಿದ್ದರು.
ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. “ವೀರ ಮಾರುತಿ “ಯಕ್ಷಗಾನ ಪ್ರದರ್ಶನ ನಡೆಯಿತು.