ಉಡುಪಿ: ಏಕಕಾಲದಲ್ಲಿ ಎಲ್ಲ ಚುನಾವಣೆಗಳು ಆಗಬೇಕು ಅನ್ನೋದು ನಮ್ಮ ಅಪೇಕ್ಷೆ. ಇದಕ್ಕೆ ವಿಪಕ್ಷಗಳು ಯಾಕೆ ಹೆದರಬೇಕು. ಯಾಕೆ ವಿರೋಧ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಬರುವ ಚುನಾವಣೆಯಿಂದ ಅಭಿವೃದ್ಧಿ ಕೆಲಸ ಕುಂಠಿತ ಆಗುತ್ತದೆ. ಭಾರತದಲ್ಲಿ ವರ್ಷದ ಮೂರ್ನಾಲ್ಕು ತಿಂಗಳು ಚುನಾವಣೆ ನಡೆಯುತ್ತಿದೆ. ಇದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತದೆ. ಟೆಂಡರ್ ಕರೆಯಲು ಆಗಲ್ಲ ಎಂದರು.
ಕೇರಳದಲ್ಲಿ ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯತ್ ನಗರಸಭೆ ಚುನಾವಣೆಗಳು ಒಟ್ಟಿಗೆ ನಡೆಯುತ್ತವೆ. ಇದೇ ರೀತಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಬಹುದು. ಚಿಹ್ನೆಯಲ್ಲಿ ನಡೆಯುವ ಚುನಾವಣೆ ಒಟ್ಟಿಗೆ ನಡೆಸಬಹುದು. ದೇಶದಲ್ಲಿ ಸಮಯ, ಶ್ರಮ, ಹಣ ಉಳಿಸಬಹುದು. ಪ್ರಚಾರದ ಖರ್ಚು ಕೂಡ ಉಳಿಯುತ್ತದೆ, ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತವೆ. ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಕೆಲಸ ಮಾಡುತ್ತಾರೆ. ಮತಯಂತ್ರ ಬೇರೆ ಇರುತ್ತದೆ, ಜನ ಯಾರಿಗೆ ಮತ ಹಾಕಬೇಕು ಅನ್ನೋದನ್ನ ಅರಿತಿದ್ದಾರೆ. ಜನರು ಸುಶಿಕ್ಷಿತರಾಗಿದ್ದಾರೆ. ಹಾಗಾಗಿ ಸರಿಯಾಗಿ ಮತದಾನ ಮಾಡುತ್ತಾರೆ ಎಂದು ಹೇಳಿದ್ರು.