ಕಾರ್ಕಳ: ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಜನವರಿ ೨೨ ರಂದು ಭಾನುವಾರ ವಿಜೃಂಭಣೆಯಿಂದ ಆರಂಭಗೊಂಡಿತು. ಮಹೋತ್ಸವವು ಐದು ದಿನಗಳ ಕಾಲ ೨೨ ರಿಂದ ೨೬ ರವೆರೆಗೆ ನಡೆಯಲಿದೆ.
ಈ ವರ್ಷದ ಮಹೋತ್ಸವದ ವಿಷಯ “ನೀವು ನನಗೆ ಸಾಕ್ಷಿಗಳಾಗುವಿರಿ”. ಜನವರಿ ೨೨ ರಂದು ಬೆಳಿಗ್ಗೆ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಳಾದ ವಂದನೀಯ ಅಲ್ಬನ್ ಡಿ’ಸೋಜಾರವರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಟಾಪಿಸಿ ಮಹೋತ್ಸವಕ್ಕೆ ಚಾಲನೆ ನೀಡಿದರು.
ದಿನದ ಪ್ರಮುಖ ಸಾಂಭ್ರಮಿಕ ಬಲಿಪೂಜೆಯನ್ನು ಉಡುಪಿ ಧರ್ಮಾಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಜೆರಾಲ್ಡ್ ಲೋಬೊರವರು ನೆರವೇರಿಸಿ ಪ್ರಬೋಧನೆ ನೀಡಿದರು.
ದೇವರ ವಾಕ್ಯದ ಭಾನುವಾರದ ಪ್ರಯುಕ್ತ ವಿಶೇಷ ಪ್ರಭೋದನೆ ನೀಡಿದ ಅವರು, “ದೇವರ ವಾಕ್ಯವನ್ನು ಆಲಿಸಿ, ಅದನ್ನು ಧ್ಯಾನಿಸಿ, ಜೀವನದಲ್ಲಿ ಪಾಲಿಸಿದಾಗ ಸದ್ಗುಣಗಳ ಫಲವನ್ನು ನೀಡಲು ಸಾಧ್ಯ. ಈ ಮುಖಾಂತರ ನಾವೆಲ್ಲರೂ ದೇವರ ಪ್ರೀತಿಯ ಮಕ್ಕಳಾಗುತ್ತೇವೆ” ಎಂದು ನುಡಿದರು.
ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರು ವಂದನೀಯ ಸ್ವಾಮಿ ಪಿಯುಸ್ ಡಿಸೋಜಾ ಬಲಿಪೂಜೆಯನ್ನು ನೆರವೇರಿಸಿ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನೂರಾರು ಹೆತ್ತವರು ತಮ್ಮ ತಮ್ಮ ಪುಟಾಣಿ ಮಕ್ಕಳೊಂದಿಗೆ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ದಿನದ ಇತರ ಬಲಿಪೂಜೆಗಳನ್ನು ವಂದನೀಯ ಲಿಯೊ ಲಸ್ರಾದೊ, ಮಂಗಳೂರು; ವಂದನೀಯ ರೊಕ್ ಡಿಸೋಜಾ, ಸಂತೆಕಟ್ಟೆ, ವಂದನೀಯ ಆ್ಯಂಡ್ರು ಡಿಸೋಜಾ, ಬಜಾಲ್ ಮತ್ತು ಉಡುಪಿ ಶೋಕಮಾತ ಚರ್ಚಿನ ಪ್ರಧಾನ ಧರ್ಮಗುರು ಅತಿ ವಂದನೀಯ ಚಾರ್ಲ್್ಸ ಮಿನೇಜಸ್ ಇವರು ನೆರವೇರಿಸಿದರು. ದಿನದ ಏಕೈಕ ಕನ್ನಡ ಬಲಿಪೂಜೆಯನ್ನು ವಂದನೀಯ ಮ್ಯಾಕ್ಸಿಮ್ ಮಿಸ್ಕಿತ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೈಬಲ್ ಪವಿತ್ರ ಗ್ರಂಥದ ವಿವರಣೆಯನ್ನು ಒಳಗೊಂಡ ವಂದನೀಯ ಡೊ. ರೊಕ್ ಡಿಸೋಜಾರವರ ಚೊಚ್ಚಲ ಪುಸ್ತಕ “ಬೈಬಲ್ ಸಳಾವಳ್” ಇದನ್ನು ಬಿಷಪ್ ಜೆರಾಲ್ಡ್ ಲೋಬೊ ಲೋಕಾರ್ಪಣೆಗೊಳಿಸಿದರು.
ಮಾಜಿ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯ್ಲಿ ಮತ್ತು ಇತರ ಗಣ್ಯರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸರ ಅನುಗ್ರಹವನ್ನು ಪಡೆದರು. ದಿನದ ಅಂತಿಮ ಬಲಿಪೂಜೆಯನ್ನು ಸಂಜೆ ೮ ಗಂಟೆಗೆ ನೆರವೇರಿಸಿ ಮಹೋತ್ಸವದ ಪ್ರಥಮ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು.
ಮಹೋತ್ಸವದ ಮುಂದಿನ ನಾಲ್ಕು ದಿನಗಳಲ್ಲಿ (ಸೋಮವಾರದಿಂದ ಗುರುವಾರ) ಬೆಳಿಗ್ಗೆ ೮, ೧೦, ೧೨ ಹಾಗೂ ಮಧ್ಯಾಹ್ನ ೨, ೪ ಮತ್ತು ೬, ೮ ಗಂಟೆಗೆ ಬಲಿಪೂಜೆಗಳು ನೆರವೇರಲಿವೆ.
ಸೋಮವಾರದಂದು ಬೆಳಿಗ್ಗೆ ೧೦.೦೦ ಗಂಟೆಗೆ ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್ ಇವರು ನೆರವೇರಿಸಲಿದ್ದಾರೆ.