ಉಡುಪಿ: ಮಹುವಾ ಮೊಯಿತ್ರಾ ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕೆ ಭ್ರಷ್ಟಾಚಾರ ಮಾಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಮತ್ತು ಕೆಟ್ಟ ಸಂದೇಶ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಂಸತ್ ಸ್ಥಾನದಿಂದ ಉಚ್ಚಾಟನೆ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪು ಚುಕ್ಕೆ. ಆಕೆ ಸಂಸದರು ಎನ್ನುವ ಪದಕ್ಕೆ ಕಳಂಕ ತಂದಿದ್ದು, ಸಂಸತ್ತಿನ ಪಾವಿತ್ರತೆ ಕಡೆಗಣಿಸಿದ್ದಕ್ಕೆ ಶಿಕ್ಷೆ ಆಗಬೇಕು. ಸಮಿತಿ ನೀಡಿರುವ ವರದಿಗೆ ತಕ್ಕಂತ ಶಿಕ್ಷೆ ಆಗಲೇಬೇಕು ಎಂದರು.
ನಾವು ಕೇಳುವ ಪ್ರಶ್ನೆಗಳನ್ನು ಗುಪ್ತವಾಗಿ ಇಡಬೇಕು. ಪಾರ್ಲಿಮೆಂಟ್ ನ ಒಳಗೆ ಬರುವ ತನಕ ಉತ್ತರ ಯಾರಿಗೂ ಗೊತ್ತಾಗುವುದಿಲ್ಲ. ಒಂದು ಪ್ರಶ್ನೆಗೆ ಒಬ್ಬ ಅಧಿಕಾರಿ 15- 20 ದಿನ ಶ್ರಮಪಡುತ್ತಾರೆ. ಅಧಿಕಾರಿಗಳ ತಂಡ ಇದಕ್ಕೆ ಕೆಲಸ ಮಾಡುತ್ತೆ. ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಚರ್ಚೆ ಮಾಡುತ್ತಾರೆ. ಆದರೆ ಮಹುವಾ ಪವಿತ್ರವಾದ ಸದನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸ್ವಂತ ಲಾಭಕ್ಕಾಗಿ ಸಾರ್ಥಕಾಗಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದು ಕಿಡಿಕಾರಿದರು.
ಆರ್ ಎಸ್ಎಸ್ ನಲ್ಲಿ ದಲಿತರ ನಿರ್ಲಕ್ಷ್ಯ ಗೂಳಿಹಟ್ಟಿ ಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ ಎಸ್ ಎಸ್ ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಎಲ್ಲ ವರ್ಗದವರು ಒಟ್ಟಾಗಿ ಇರಬೇಕು ಎನ್ನುವುದೇ ಆರ್ ಎಸ್ ಎಸ್ ಆಶಯ. ಭಾರತದ ಅಭ್ಯುದಯಕ್ಕೆ ಇದುವೇ ಮಾರ್ಗ ಎಂದು ಆರ್ ಎಸ್ ಎಸ್ ನಂಬಿದೆ. ಗೂಳಿಹಟ್ಟಿ ಅವರಿಗೆ ಆರ್ ಎಸ್ ಎಸ್ ಬಗ್ಗೆ ತಪ್ಪು ಮಾಹಿತಿ ಇದೆ, ಅವರು ಸಂಘಕ್ಕೆ ಬರಲಿ ಎಂದರು.