ಉಡುಪಿ: ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ನೇಜಾರಿನಲ್ಲಿ ಸ್ಥಳ ಮಹಜರಿಗೆ ಗುರುವಾರ ಮಧ್ಯಾಹ್ನ ಕರೆ ತಂದಾಗ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಹತ್ಯೆ ನಡೆದ ಮನೆಗೆ ಬಂಧಿತ ಆರೋಪಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಚೌಗಲೆಯನ್ನು ಪೊಲೀಸರು ಸ್ಥಳ ಮಹಜರಿಗೆ ಬಿಗಿ ಭದ್ರತೆಯ ನಡುವೆ ಕರೆತಂದಿದ್ದಾರೆ.
ಈ ವೇಳೆ ಜಮಾಯಿಸಿದ್ದ ಸ್ಥಳೀಯರು ಆರೋಪಿ ವಿರುದ್ಧ ಆಕ್ರೋಶ ಹೊರ ಹಾಕಿ ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ ಎಂದು ಘೋಷಣೆ ಕೂಗಿದ್ದಾರೆ. ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ. ಆತ 15 ನಿಮಿಷ ತೆಗೆದುಕೊಂಡಿದ್ದಾನೆ ನಮಗೆ 30 ಸೆಕೆಂಡು ಅವನನ್ನು ಕೊಡಿ ಎಂದು ಸಾರ್ವಜನಿಕರು ಕೂಗಿದ್ದಾರೆ. ಬಳಿಕ ತೃಪ್ತಿ ನಗರ ದಲ್ಲಿ ಪೊಲೀಸರ ವಿರುದ್ಧ ಸಾರ್ವಜನಿಕರ ಧಿಕ್ಕಾರ ಕೂಗಿದರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ನಂತರ ಜನಾಕ್ರೋಶದ ನಡುವೆ ಮಹಜರು ಮುಗಿಸಿ ಆರೋಪಿಯನ್ನು ಕರೆದುಕೊಂಡ ಹೋಗಲಾಯಿತು. ಸ್ಥಳಕ್ಕೆ ಎಸ್ ಪಿ, ಡಿ ಸಿ ಬರಬೇಕು ಎಂದು ಸಾರ್ವಜನಿಕರ ಆಗ್ರಹಿಸಿ ರಸ್ತೆ ತಡೆ ಮೂಲಕ ಸಾರ್ವಜನಿಕರು ಪ್ರತಿಭಟಿಸಿದರು.