ಕುಂದಾಪುರ: ಬರೆಯುವ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಕಲೆಯ ಸ್ಪರ್ಶದಿಂದ ಬದುಕು ಸುಂದರವಾಗುತ್ತದೆ. ಕಲಾತ್ಮಕ ಜಗತ್ತಿನ ಅನುಭವ ಖುಷಿ ಕೊಡುವಂತದ್ದು ಎಂದು ಲೇಖಕ ಹಿರಿಯ ಪತ್ರಕರ್ತ ಜೋಗಿ ಹೇಳಿದರು.
ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ನಡೆದ ‘ಹಸ್ತಿನಾವತಿ’ ಕಾದಂಬರಿ ಮರು ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಚಿಕ್ಕಂದಿನಲ್ಲಿ ಶಿವರಾಮ ಕಾರಂತರ ಭಾಷಣ ಕೇಳಿ ಬೆಳೆದವರು ಅದುವೇ ನಮ್ಮನ್ನು ಇಲ್ಲಿ ತಂದು ನಿಲ್ಲಿಸಿದೆ.ಒಂದು ಹಾಡು ಬರೆದರೆ ಅದು ಎಷ್ಟು ವರ್ಷ ಕಳೆದರೂ ನನ್ನ ಹಾಡು ಅನ್ನುವ ಭಾವ ಇರುತ್ತದೆ.ಕಥೆ, ಕಾದಂಬರಿ ಬರೆದರೂ ಇದೇ ಭಾವ ಬರುತ್ತದೆ.ಬರವಣಿಗೆಯಲ್ಲಿ ಸಾರ್ಥಕತೆಯ ಬದುಕು ಅಡಕವಾಗಿರುತ್ತದೆ.ಸಾಹಿತ್ಯ ಲೋಕಕ್ಕೆ ಮೊಗೇರಿ ಗೋಪಾಲಕೃಷ್ಣ ಅಡಿಗರಂತಹ ಅತ್ಯದ್ಭುತ ಲೇಖಕರನ್ನು ಕೊಟ್ಟ ಹೆಗ್ಗಳಿಕೆಗೆ ಕುಂದಾಪುರ ಪಾತ್ರವಾಗಿದೆ ಎಂದರು.
ಕವಿ ಜೋಗಿ ಅವರ ಹಸ್ತಿನಾವತಿ ಕಾದಂಬರಿ ಅನಾವರಣಗೊಳಿಸಿದ ಬೆಂಗಳೂರು ವಿವಿ ವಿತ್ತಾಧಿಕಾರಿ ಅಜಿತ್ ಹೆಗ್ಡೆ ಶಾನಾಡಿ ಮಾತನಾಡಿ ಕೃತಿಯಲ್ಲಿ ರಾಜಕೀಯ,ಧಾರ್ಮಿಕ, ಪ್ರೇಮಕತೆ ಎಲ್ಲವೂ ಇದೆ. ಮುಖ್ಯವಾಗಿ ಯುವಕರು ಓದಬೇಕಾದ ಪುಸ್ತಕವಿದು ಎಂದರು.
ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕದ ಒಳನೋಟ ತೆರೆದಿಟ್ಟರು. ಕುಂದಾಪುರದ ವಕೀಲ ಸತೀಶ್ಚಂದ್ರ ಕಾಳಾವರ್ಕರ್ ಶುಭಹಾರೈಸಿದರು.
ಕಾಲೇಜಿನ ಪ್ರಿನ್ಸಿಪಾಲ್ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಜತೆ ಜೋಗಿಯವರ ಸಂವಾದ ನಡೆಯಿತು.
ಜನಸೇವಾ ಟ್ರಸ್ಟ್ನ ಸಂಚಾಲಕ ವಸಂತ ಗಿಳಿಯಾರು ಪ್ರಸ್ತಾವಿಸಿದರು,ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು, ರಾಘವೇಂದ್ರ ರಾಜ್ ಸಾಸ್ತಾನ ವಂದಿಸಿದರು.