ಕುಂದಾಪುರ: ಮೀನುಗಾರಿಕೆ ಮಾಡಲು ಮೀನುಗಾರರಿಗೆ ಅಗತ್ಯವಾಗಿ ಬೇಕಾಗಿರುವ ಸೀಮೆ ಎಣ್ಣೆಯನ್ನು ಸರಕಾರ ಸರಿಯಾದ ರೀತಿಯಲ್ಲಿ ಪೂರೈಕೆ ಮಾಡದೆ ಇರುವುದರಿಂದ ಮೀನುಗಾರರು ಕಂಗಾಲಾಗಿ ಹೋಗಿದ್ದಾರೆ. ಸರಕಾರದ ಭರವಸೆಗಳ ನಡುವೆಯೂ ಮೀನುಗಾರರಿಗೆ ಸೂಕ್ತ ಸಂದರ್ಭದಲ್ಲಿ ಸೀಮೆ ಎಣ್ಣೆಯನ್ನು ವಿತರಿಸದ ಕಾರಣ ಮೀನುಗಾರಿಕೆ ಋತುವಿನ ಸಂದರ್ಭದಲ್ಲಿ ಮೀನುಗಾರಿಕೆ ಮಾಡಲು ಸಾಧ್ಯವಿಲ್ಲದೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂದಿನ 20 ದಿನಗಳಲ್ಲಿ ಬಾಕಿ ಉಳಿದಿರುವ ಸೀಮೆ ಎಣ್ಣೆಯನ್ನು ಪೂರೈಕೆ ಮಾಡುವಂತೆ ಮೀನುಗಾರರು ಆಗ್ರಹಿಸಿದ್ದಾರೆ. ಸರಕಾರ, ಶಾಸಕರು, ಸಚಿವರು ಸೇರಿದಂತೆ ವಿಪಕ್ಷ ನಾಯಕರಗಳನ್ನು ಭೇಟಿ ಮಾಡಿ ಸೀಮೆ ಎಣ್ಣೆಯನ್ನು ಮೀನುಗಾರರಿಗೆ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಸಾಲು ಸಾಲು ಮನವಿಗಳನ್ನು ನೀಡಿದ್ದರು ಇಲ್ಲಿ ತನಕ ಯಾವುದೇ ರೀತಿಯಲ್ಲಿ ಸ್ಪಂದನೆ ದೊರೆತ್ತಿಲ್ಲ ಎಂದು ಮೀನುಗಾರರು ದೂರಿದ್ದಾರೆ.
ಮುಂದಿನ 3 ವಾರಗಳಲ್ಲಿ 7000 ಕೆ.ಎಲ್ ಸೀಮೆ ಎಣ್ಣೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳದೆ ಹೋದರೆ ಸಂಕಲ್ಪ ಮಂಡನಾ ಸಭೆ ಮೂಲಕ ಮುಂದಿನ ಚುನಾವಣೆಯಲ್ಲಿ ಮೀನುಗಾರರ ಬಂಧುಗಳು ನೋಟಾ ಅಭಿಯಾನ ಮಾಡಲು ಚಿಂತನೆ ಮಾಡಲಾಗುವುದು ಎನ್ನುವುದು ಎಂದು ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಗಂಗೊಳ್ಳಿ ಅಧ್ಯಕ್ಷ ಯಶವಂತ ಖಾರ್ವಿ ತಿಳಿಸಿದ್ದಾರೆ.