ಕುಂದಾಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎ. 29ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಪೇಟೆಯಲ್ಲಿ ರೋಡ್ ಶೋ ನಡೆಸುವರು. ಕಟಪಾಡಿಯಲ್ಲಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ನಲ್ಲಿ ಸಿದ್ದಾಪುರಕ್ಕೆ ಬರಲಿದ್ದು, ಸಂಜೆ 4 ಗಂಟೆಗೆ ಪೇಟೆಯಲ್ಲಿ ರೋಡ್ ಶೋ ನಡೆಸಿ ಸಿದ್ದಾಪುರ ಸರ್ಕಲ್ನಲ್ಲಿ ತೆರೆದ ವಾಹನದಲ್ಲೇ ಜನರನ್ನುದ್ದೇಶಿಸಿ ಮಾತನಾಡುವರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಸಹಿತ ಹಲವರು ಪಾಲ್ಗೊಳ್ಳಲಿದ್ದು, 10 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಮತ್ತು ಡಿವೈಎಸ್ಪಿ ಬೆಳ್ಳಿಯಪ್ಪ ಅವರು ಭೇಟಿ ನೀಡಿ, ಭದ್ರತೆಯ ಪೂರ್ವ ತಯಾರಿಯ ಬಗ್ಗೆ ಪರಿಶಿಲಿಸಿದರು.
ಶಂಕರನಾರಾಯಣ, ಅಮಾಸೆಬೈಲು ಮತ್ತು ಕಂಡ್ಲೂರು ಪಿಎಸ್ಐಗಳು ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಸಚಿವರಿಗೆ ಜಡ್ ಪ್ಲಸ್ ಭದ್ರತೆ ಇರುವುದರಿಂದ 6 ಮಂದಿ ಇನ್ಸ್ಪೆಕ್ಟರ್ಗಳು, 20 ಮಂದಿ ಪಿಎಸ್ಐಗಳು, 160 ಮಂದಿ ಪೊಲೀಸ್ ಸಿಬಂದಿ, ಹಾಗೂ 100ಕ್ಕೂ ಹೆಚ್ಚು ಡಿಆರ್ ಪೊಲೀಸರನ್ನು ಬಿಗಿ ಭದ್ರತೆಗೆ ಬಳಸಲಾಗುತ್ತಿದೆ.
ಶನಿವಾರದಂದು ಸಿದ್ದಾಪುರ ಸುತ್ತಲಿನ ಬಾರ್ಗಳು ಬಂದ್ ಆಗಲಿವೆ. ಬಸ್ ನಿಲ್ದಾಣದಲ್ಲಿ ಮತಯಾಚನೆ ಮಾಡುವುದರಿಂದ ಬಸ್ ನಿಲ್ದಾಣದ ಪರಿಸರದ ಅಂಗಡಿ-ಮುಂಗಟ್ಟುಗಳು ಬಂದ್ ಆಗಲಿವೆ.