ಉಡುಪಿ: ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳೊಂದಿಗೆ ಮಾಹಿತಿಹಕ್ಕು ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆ ಮಾಡಲು ಮುಂದಾದ ಘಟನೆ ಸಾಸ್ತಾನ ಸಮೀಪದ ಐರೋಡಿಯಲ್ಲಿ ಶನಿವಾರ ನಡೆದಿದೆ.
ಐರೋಡಿಯ ಆರ್ಟಿಐ ಕಾರ್ಯಕರ್ತ ಥೋಮಸ್ ರೋಡಿಗ್ರಸ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾದ ಅರಾಟೆ ರಾಘವೇಂದ್ರ ಆಚಾರ್ಯ, ಕುಂಜಾಲು ಮನೋಜ್ ಆಚಾರ್ಯ, ಮೊವಾಡಿಯ ಸದಾ ಹಾಗೂ ನಾಗರಾಜ ಮೊವಾಡಿ, ರವಿ ಮೊಗವೀರ ಸೇನಾಪುರ, ಚಂದ್ರ ಅರಾಟೆ ಎಂಬವರು ನಿನ್ನೆ ಥೋಮಸ್ ಅವರ ಮನೆಗೆ ಏಕಾಏಕಿಯಾಗಿ ಮಾರಕಾಸ್ತ್ರಗಳೊಂದಿಗೆ ನುಗ್ಗಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೊಸಾಡು ಸೇನಾಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ವಿರೋಧಿಸಿ ಥೋಮಸ್ ಹೋರಾಟ ನಡೆಸುತ್ತಿದ್ದು, ಇದನ್ನು ನಿಲ್ಲಿಸುವಂತೆ ಆರೋಪಿಗಳು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹೋರಾಟ ನಿಲ್ಲಿಸದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತನಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಥೋಮಸ್ ಕೋಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.