ಕಾರ್ಕಳ: ದೇಶದ ಅತೀ ದೊಡ್ಡ ಪರಶುರಾಮ ದೇವರ ವಿಗ್ರಹ ಇಲ್ಲಿನ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣಗೊಂಡಿದ್ದು, ದೇಶವಿದೇಶದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅವರು ಕಾರ್ಕಳವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಮಾರು ೧೦ ಕೋಟಿ ರು. ವೆಚ್ಚದಲ್ಲಿ ಈ ಪರಶುರಾಮ್ ಥೀಮ್ ಪಾರ್ಕ್ ಯೋಜನೆ ಕಾರ್ಯರೂಪಕ್ಕೆ ಬಂದಿದೆ.
ಉಡುಪಿಯಿಂದ ಕಾರ್ಕಳ ತೆರಳುವ ರಾಷ್ಟ್ರೀಯ ಹೆದ್ದಾರಿಯ ಬೈಲೂರು ಗ್ರಾಮದ ಈ ಉಮಿಕಲ್ ಬೆಟ್ಟದ ಹಸಿರು ಪ್ರಕೃತಿ ಸೌಂದರ್ಯದ ಮಧ್ಯೆ ವಿಶಾಲವಾದ ಬಂಡೆಕಲ್ಲಿನ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಅತ್ಯಾಕರ್ಷಕ ಈ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸಮುದ್ರ ಮಟ್ಟದಿಂದ ೫೦೦ ಅಡಿ ಎತ್ತಡದಲ್ಲಿರುವ ಈ ಉಮಿಕಲ್ ಬೆಟ್ಟದ ತುತ್ತುತದಿಯಲ್ಲಿ ೧೦ ಅಡಿ ಎತ್ತರದ ಪೀಠದ ಮೇಲೆ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಜೊತೆ ೧೦೦೦ ಮಂದಿ ಆಸೀನರಾಗಬಹುದಾದ ತೆರೆದ ರಂಗಮಂದಿರ, ಪರಶುರಾಮನ ಕತೆ ಹೇಳುವ ಆಡಿಯೋ ವಿಶ್ಯುವಲ್ – ಆರ್ಟ್ ಗ್ಯಾಲರಿ – ಮ್ಯೂಸಿಯಂ ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ರೆಸ್ಟೋರೆಂಟ್ ಕೂಡ ಇಲ್ಲಿದೆ.
ಉಡುಪಿಯ ಯುವ ವಾಸ್ತುವಿನ್ಯಾಸಗಾರ ಎ.ಆರ್. ಸಂಪ್ರೀತ್ ರಾವ್ ಈ ಥೀಮ್ ಪಾರ್ಕನ್ನು ವಿನ್ಯಾಸಗೊಳಿಸಿದ್ದು, ಸುಮಾರು ೧೦೦ ಅಡಿ ಎತ್ತರದ ಬಂಡೆಕಲ್ಲನ್ನು ಮತ್ತು ಅದರ ಸುತ್ತ ಪ್ರಾಕೃತಿಕ ಪರಿಸರ – ಮರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಉಡುಪಿ ನಿರ್ಮಿತಿ ಕೇಂದ್ರ ಈ ಯೋಜನೆಯ ನಿರ್ಮಾಣದ ಉಸ್ತುವಾರಿ ವಹಿಸಿದ್ದು, ವರ್ಷದೊಳಗೆ ನಿರ್ಮಾಣ ಕಾಮಗಾರಿಯನ್ನು ಪೂರೈಸಿದೆ.
ಬೆಂಗಳೂರಿನ ಖ್ಯಾತ ಶಿಲ್ಪಿ ಕೃಷ್ಣ ನಾಯಕ್ ಈ ೩೩ ಅಡಿ ಎತ್ತರದ ಕಂಚಿನ ವಿಗ್ರಹವನ್ನು ನಿರ್ಮಿಸಿದ್ದಾರೆ. ಆರ್ಟ್ ಮ್ಯೂಸಿಯಂನಲ್ಲಿ ಪರಶುರಾಮರ ಜೀವನ ಚರಿತ್ರೆಯನ್ನು ಪರಿಚಯಿಸುವ ಪೈಬರ್ ಗ್ಲಾಸ್ ಉಬ್ಬುಚಿತ್ರಗಳನ್ನು ಖ್ಯಾತ ಕಲಾವಿದ ಪುರುಷೋತ್ತಮಅಡ್ವೆ ಅವರು ರಚಿಸಿದ್ದಾರೆ. ಈ ಯೋಜನೆಗೆ ಪ್ರವಾಸೋದ್ಯಮ ಇಲಾಖೆಯಿಂದ ೬.೫೦ ಕೋಟಿ ರು., ಮಲೆನಾಡು ಅಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಪಿಟಿಸಿಎಲ್ ನ ಸಿಎಸ್ಆರ್ ನಿಧಿಯಿಂದ ತಲಾ ೧ಕೋಟಿ ರು.ಗಳ ಅನುದಾನವನ್ನು ಪಡೆಯಲಾಗಿದೆ.
ಯಾಕೆ ಪರಶುರಾಮ ಥೀಮ್ ಪಾರ್ಕ್
ವಿಷ್ಣುವಿನ ೬ನೇ ಅವತಾರವಾಗಿರುವ ಪರಶುರಾಮ ಪಶ್ಚಿಮ ಘಟ್ಟಗಳ ಮೇಲೆ ನಿಂತು ತನ್ನ ಕೊಡಲಿಯನ್ನು ಅರಬ್ಬಿ ಸಮುದ್ರಕ್ಕೆ ಎಸೆದು, ಅದು ಬಿದ್ದಲ್ಲಿಯವರೆಗೆ ಸಮುದ್ರ ರಾಜ ಭೂಮಿಯನ್ನು ಬಿಟ್ಟುಕೊಟ್ಟು, ಇಲ್ಲಿನ ಕರಾವಳಿ ಪ್ರದೇಶ ಸೃಷ್ಟಿಯಾಯಿತು ಎನ್ನುವುದು ಪುರಾಣಕತೆ. ಪರಶುರಾಮರ ಈ ಚರಿತ್ರೆಯನ್ನು ಅಜರಾಮರಗೊಳಿಸುವಂತೆ ಥೀಮ್ ಪಾರ್ಕನ್ನು ರಚಿಸಲಾಗಿದೆ. ಪರಶಿರಾಮ ಒಂದು ಕೈಯಲ್ಲಿ ಧನಸ್ಸು, ಇನ್ನೊಂದು ಕೈಯಲ್ಲಿ ಕೊಡಲಿಯನ್ನು ಎತ್ತಿ ಹಿಡಿದ ವೀರಾವೇಷ ಭಂಗಿಯಲ್ಲಿ ಈ ವಿಗ್ರಹವನ್ನು ರಚಿಸಲಾಗಿದೆ.
ಅಭಿವೃದ್ಧಿ, ಹಿಂದುತ್ವ ದಲ್ಲಿ ರಾಜೀ ಇಲ್ಲ
ವಿ.ಸುನೀಲ್ಕುಮಾರ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಅಭಿವೃದ್ಧಿ, ಹಿಂದುತ್ವದಲ್ಲಿ ಯಾವುದೇ ತರದಲ್ಲಿ ರಾಜೀಸಲ್ಲದು. ಸನಾತನ ಭಾರತೀಯ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಕಲೆ ಇವುಗಳಿಗೆ ಪ್ರೋತ್ಸಾಹ ನೀಡಿ ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ಸತ್ಕಾರ್ಯವು ನಡೆಯಬೇಕು. ಕಾರ್ಕಳ ಕ್ಷೇತ್ರವು ದೇಶ ಮತ್ತು ವಿದೇಶಗಳಲ್ಲಿ ಗುರುತಿಸುವ ಕಾರ್ಯವು ನಮ್ಮೆಲ್ಲರಿಂದ ನಡೆಯಬೇಕು.