ಕಾರ್ಕಳ: ಸುಧೀರ್ಘ ಇತಿಹಾಸವುಳ್ಳ ಯಕ್ಷಗಾನ ಕಲೆ ಇಂದು ವಿಶ್ವಮಟ್ಟದಲ್ಲಿ ಜನ ಮನ್ನಣೆ ಪಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಸರ್ವಾಂಗ ಸುಂದರ ಆರಾಧನಾಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಈ ನಿಟ್ಟಿನಲ್ಲಿ ಕಾರ್ಕಳದಲ್ಲಿ ಸಮಾನ ಮನಸ್ಕರ ಸಹಕಾರದೊಂದಿಗೆ ೨೦೧೨ರಲ್ಲಿ ಹುಟ್ಟು ಹಾಕಿದ ಸಂಸ್ಥೆ ಯಕ್ಷಕಲಾರಂಗ. ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ನಾಟ್ಯ ತರಬೇತಿ ನೀಡಿ ವರ್ಷಾಂತ್ಯದಲ್ಲಿ ಆ ಮಕ್ಕಳಿಗೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ಕಿಶೋರ ಯಕ್ಷೆ (ಮಕ್ಕಳ ಯಕ್ಷಗಾನ) ಕಾರ್ಯಕ್ರಮ ವಾರ್ಷಿಕವಾಗಿ ನಡೆಸುತ್ತಾ ಬಂದಿರುತ್ತದೆ.
ಅಂತೆಯೇ ಕಳೆದ ೧೦ ವರ್ಷಗಳಿಂದಲೂ ಯಶಸ್ವಿಯಾಗಿ ಯಕ್ಷೆತ್ಸವವನ್ನು ನಡೆಸಿಕೊಂಡು ಬಂದಿದ್ದು ಮತ್ತೆ ಈ ವರ್ಷವೂ ತಾಲೂಕಿನ ೧೨ ಶಾಲಾ ಕಾಲೇಜುಗಳಲ್ಲಿ ಸುಮಾರು ೨೪೦ ಮಕ್ಕಳಿಗೆ ಬೇರೆ ಬೇರೆ ಗುರುಗಳಿಂದ ನಾಟ್ಯ ತರಬೇತಿ ನೀಡಿ ಇದೇ ಜನವರಿ ೧೪ನೇ ಶನಿವಾರ ಮತ್ತು ೧೫ನೇ ಆದಿತ್ಯವಾರದಂದು ಕಾರ್ಕಳ ಪೆರ್ವಾಜೆ ನಾರಾಯಣಗುರು ಸಭಾ ಭವನದಲ್ಲಿ ಕಿಶೋರ ಯಕ್ಷೆತ್ಸವ ೨೦೨೩ ಜರಗಲಿದೆ.
ಜ.೧೪ ರಂದು ಬೆಳಿಗ್ಗೆ ೧೦ ಗಂಟೆಗೆ ವಿಜಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉದ್ಯಮಿ ಡಿ.ಆರ್.ರಾಜು ರವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಉದ್ಯಮಿ ನಿತ್ಯಾನಂದ ಪೈ ಶುಭಾಶಂಸನೆ ಗೈಯಲಿದ್ದಾರೆ. ೨ ದಿನಗಳಲ್ಲಿ ೧೩ ಶಾಲಾ ಕಾಲೇಜುಗಳ ಯಕ್ಷಗಾನ ಪ್ರದರ್ಶನ ಜರಗಲಿದೆ.
ಆ.೧೫ ರಂದು ಸಂಜೆ ೬.೦೦ ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು ಉದ್ಯಮಿ ರಾಜೇಶ್ ರೆಂಜಾಳ ಸಮಾರೋಪ ಭಾಷಣ ಮಾಡಲಿದ್ದಾರೆ. ಡಾ. ಕೆ.ಆರ್. ಜೋಷಿಯ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ಸಂಸ್ಥೆಯ ಸಂಚಾಲಕರಾದ ಬಿ.ಪದ್ಮನಾಭ ಗೌಡ, ಅಧ್ಯಕ್ಷರಾದ ವಿಜಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.