ಕಾರ್ಕಳ: ಹಿಂದುತ್ವದ ಹೆಸರಿನಲ್ಲಿ ಸರ್ವಸ್ವವನ್ನು ತ್ಯಾಗಮಾಡಿ ಹಿಂದು ಸಂಘಟನೆಯ ಮೂಲಕ ಜನಜಾಗೃತಿ ಮೂಡಿಸುತ್ತಿರುವ ನನಗೆ ಹಾಗೂ ಶ್ರೀರಾಮ ಸೇನಾ ಸಂಘಟನೆಗೆ ಗೋವಾ ಬಿಜೆಪಿ ಸರಕಾರವು ಕಳೆದ ೮ ವರ್ಷಗಳಿಂದ ನಿರ್ಬಂಧ ಹೇರಿದೆ. ಮಾತ್ರವಲ್ಲ ಕರ್ನಾಟಕ ಬಿಜೆಪಿ ಸರಕಾರವು ೧೭ ಜಿಲ್ಲೆಗಳ ಪ್ರವೇಶಕ್ಕೆ ನಿರ್ಬಂಧಿಸಿತ್ತು.
ಅವಿಭಜಿತ ದಕ್ಷಿಣದ ಗಂಗೊಳ್ಳಿಯಲ್ಲಿ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಮನೆಮಂದಿಗೆ ಸಾಂತ್ವನ ಹೇಳಲು ಸುಳ್ಯಕ್ಕೆ ಹೋಗಲೆಂದು ಉಡುಪಿಯಿಂದ ಹೊರಟಾಗ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಮಾಡದಂತೆ ಜಿಲ್ಲಾಡಳಿತವು ತಡೆಯೊಡ್ಡಿತ್ತು. ಆ ಸಂದರ್ಭದಲ್ಲಿ ಸಚಿವ ವಿ.ಸುನೀಲ್ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯಾಗಿದ್ದರು ಎಂಬುದನ್ನು ಮೆರೆಯಲು ಸಾಧ್ಯವೇ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಸರ್ವೋಚ್ಛ ನಾಯಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಕುಕ್ಕುಂದೂರಿನ ಪರಪ್ಪುವಿನ ಪಾಂಚಜನ್ಯ ಕಾರ್ಯಲಯದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭೂಗತದೊರೆಗಳಿಂದ ಬೆದರಿಕೆಗಳು ನಿರಂತರವಾಗಿ ಬರುತ್ತಿದ್ದು, ಆದರೂ ಬಿಜೆಪಿ ಸರಕಾರ ನನಗೆ ನೀಡಿದ ಭದ್ರತೆಯನ್ನು ಹಿಂಪಡೆದಿದೆ. ನಾನು ಸಾವಿಗೆ ಹೆದರುವುದಿಲ್ಲ. ಹಿಂದುತ್ವದಿಂದ ಹಿಂದೆ ಸರಿಯುವ ವ್ಯಕ್ತಿ ನಾನಲ್ಲ. ಭಯಮುಕ್ತ, ಭ್ರಷ್ಟಚಾರ ಮುಕ್ತ ವಾತಾವರಣ ಸೃಷ್ಠಿಸುವುದೇ ನನ್ನ ಗುರಿಯಾಗಿದೆ ಎಂದರು.
ಭ್ರಮೆಯಿಂದ ಹೊರಬನ್ನಿ: ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೋವುಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಅದನ್ನು ಮಟ್ಟ ಹಾಕಲು ಇನ್ನೂ ಸಾಧ್ಯವಾಗಿಲ್ಲ. ಮತಾಂತರ ಕುಕೃತ್ಯಗಳು ಎಲ್ಲೆಮೀರಿದೆ. ಪರ್ಪಲೆ ಗುಡ್ಡ ಅಭಿವೃದ್ಧಿ ಮರೀಚಿಕೆ ಇದನ್ನೆಲ್ಲ ಮರೆಮಾಚುವ ನಿಟ್ಟಿನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕಾರ್ಕಳಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಅವರು ಬಂದೊಡನೆ ಬಿಜೆಪಿಗೆ ತನ್ನಿಂದ ತಾನೇ ಹೆಚ್ಚೆಚ್ಚು ಮತಗಳು ಪ್ರಾಪ್ತಿಯಾಗಲಾರದು. ಭ್ರಷ್ಟಾಚಾರಗಳ ಕರಿಛಾಯೆ ಎಲ್ಲಿಯ ತನಕ ಇರುತ್ತದೆಯೋ ಅಲ್ಲಿಯವರೆಗೆ ಕಾರ್ಕಳದಲ್ಲಿ ಬಿಜೆಪಿಗೆ ಮತ ಹಾಕುವವರು ಯೋಚಿಸುತ್ತಾರೆ. ಯೋಗಿ ಬಂದರೂ ಕೂಡಾ ಮತದಾರರ ನಿರ್ಧಾರ ಬದಲಾಗದು. ಯೋಗಿ ಬಂದರೆ ಬಿಜೆಪಿಕಾರ್ಕಳದಲ್ಲಿ ಗೆದ್ದು ಬಿಡುತ್ತದೆಂಬ ಭ್ರಮೆಯಿಂದ ಬಿಜೆಪಿಗರು ಹೊರಬರಬೇಕೆಂದರು.
ಬಜರಂಗದಳದ ನಿಷೇಧ ದೇಶಕ್ಕೆ ಮಾರಕ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಂತೆ ಬಜರಂಗದಳ ನಿಷೇಧ ಕುರಿತು ಉಲ್ಲೇಖಿಸಿ ಮಾತನಾಡಿದ ಮುತಾಲಿಕ್ ಯಾವುದೇ ಕಾರಣಕ್ಕೂ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದು. ಬಜರಂಗದಳ ಯಾವ ಅಪರಾಧ ಕೃತ್ಯ ನಡೆಸಿದೆ. ಸಮರ್ಪಣ ಮನೋಭಾವದಿಂದ ಕೆಲಸ ಸತ್ಕಾರ್ಯಗಳು ನಡೆಸುತ್ತಾ ಬಂದಿದೆ. ಹಾವು ಸಾಯಬಾರದು ಕೋಲು ಮುರಿಯಬಾರದೆಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಂದಂತಾಗಿದೆ ಎಂದು ವ್ಯಂಗ್ಯವಾಡಿದರು.
ಧಾರ್ಮಿಕ ದತ್ತಿ ಕಾನೂನು ಉಲ್ಲಂಘನೆ: ಇತ್ತೀಚಿಗೆ ಕಾರ್ಕಳ ಕೋಟೆ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಪುನರ್ ಪ್ರತಿಷ್ಠೆಯ ಸಂದರ್ಭದಲ್ಲಿ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಕಾನೂನುಗಳನ್ನು ಉಲ್ಲಂಘನೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಮಾಹಿತಿ ನೀಡಿದರು. ಈ ಕುರಿತು ಲೋಕಾಯುಕ್ತ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಲು ಅಗತ್ಯ ದಾಖಲೆಗಳನ್ನು ಕ್ರೋಡೀಕರಿಸಿರುವುದಾಗಿ ಮಾಹಿತಿ ಒದಗಿಸಿದರು.
ಆರೋಪಗೈದವರು ಕೋಟೆ ಶ್ರೀಮಾರಿಯಮ್ಮ ದೇವಸ್ಥಾನದ ಸನ್ನಿಧಾನಕ್ಕೆ ಬರಲಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಡನೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅವರಿಂದ ಆರ್ಥಿಕ ನೆರವು ಪಡೆಯಲಾಗಿದೆ ಎಂದು ಯಾರೇ ಆರೋಪಿಸಲಿ. ಅವರೊಮ್ಮೆ ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಸನ್ನಿಧಾನಕ್ಕೆ ಬರಲಿ. ನಾನು ತೆಂಗಿನ ಕಾಯಿ ಇಡುತ್ತೇನೆ. ಅವರು ಬಂದು ಇಡಲಿ. ಪ್ರಮಾಣ ಮಾಡಲಿ ಎಂದು ಇದೇ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಶಪಥಗೈದರು.
ಶ್ರೀರಾಮ ಸೇವೆಯ ರಾಜ್ಯ ಕಾರ್ಯದರ್ಶೀ ಗಂಗಾಧರ ಕುಲಕರ್ಣಿ, ಮುಖಂಡರಾದ ಹರೀಶ್ ಅಧಿಕಾರಿ, ವಿವೇಕಾನಂದ ಶೆಣೈ, ಸುಭಾಶ್ವಚಂದ್ರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.