ಕಾರ್ಕಳ: ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ೨೦೨೧ – ೨೦೨೨ ಸಾಲಿನ ರಾಜ್ಯಾಧ್ಯಕ್ಷರಾಗಿದ್ದ ಕಾರ್ಕಳದ ಡಾ. ಸುರೇಶ್ ಕುಡ್ವರವರಿಗೆ ೨೦೨೧ – ೨೨ ನೇ ಸಾಲಿನ ರಾಷ್ಟ್ರದ ಅತ್ಯುತ್ತಮ ರಾಜ್ಯಾಧ್ಯಕ್ಷರೆಂದು ಪ್ರಶಸ್ತಿಯನ್ನು ಐಎಂಎ ರಾಷ್ಟ್ರಾಧ್ಯಕ್ಷ ಡಾ. ಸಹಜಾನಂದ ಪ್ರಸಾದ ಸಿಂಗ್ ರವರು ಪ್ರಯಾಗ್ ರಾಜನಲ್ಲಿ ಜರುಗಿದ ರಾಷ್ಟ್ರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಕಟೀಲಿನಲ್ಲಿ ಜನಿಸಿ, ಶ್ರೀ ದುರ್ಗಾ ಪರಮೇಶ್ವರಿ ದೇವಳ ವಿದ್ಯಾ ಸಂಸ್ಥೆಗಳಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ ಪಡೆದ ಅವರು ಪಿಯುಸಿ ವ್ಯಾಸಂಗ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಮುಗಿಸಿದರು. ಇವರು ಎಂಬಿಬಿಎಸ್ ಪದವಿ ಮಣಿಪಾಲದ ಕೆಎಂಸಿ ಯಲ್ಲಿ ೨ ನೇ ರ್ಯಾಂಕ್ ನೊಂದಿಗೆ ಹಾಗೂ ಎಚಿಡಿ (ಪದವಿ) ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದರು.
ಕಳೆದ ೪೦ ವರ್ಷಗಳಿಂದ ಕಾರ್ಕಳದಲ್ಲಿ ಮಕ್ಕಳ ತಜ್ಞರಾಗಿ ಜನಪ್ರಿಯರಾದ ಇವರು ಜೇಸಿ, ರೊಟರಿ ಹಾಗೂ ರೆಡ್ ಕ್ರಾಸ್ ಹಾಗೂ ಐಎಂಎ ಯ ಸ್ಥಾಪಕ ಕಾರ್ಯದರ್ಶಿಗಳಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ೧೯೮೮ ರಲ್ಲಿ ಅಂತರಾಷ್ಟ್ರೀಯ ರೊಟರಿ ಗವರ್ನರ್ ಪ್ರಶಸ್ತಿ, ೧೯೯೮ರಲ್ಲಿ ಅತ್ಯುತ್ತಮ ಜೇಸಿ ಪ್ರಶಸ್ತಿ, ಐಎಂಎಯಲ್ಲಿ ೧೯೯೧ರಲ್ಲಿ ರಾಷ್ಟ್ರದಲ್ಲಿಯೇ ಉತ್ತಮ ಘಟಕ ಪ್ರಶಸ್ತಿ, ೨೦೦೪ರಿಂದ ೨೦೦೭ರವರಿಗೆ ಪ್ರತೀವರ್ಷ ರಾಜ್ಯಾಧ್ಯಕ್ಷರ ಪ್ರಶಸ್ತಿ, ೨೦೧೯ ರಲ್ಲಿ ಡಾಕ್ಟರ್ ಬಿ.ಸಿ. ರಾಯ್ ರಾಜ್ಯ ಪ್ರಶಸ್ತಿ, ೨೦೦೮ರಲ್ಲಿ ಐಎಂಎ ದೆಹಲಿ ಅತ್ಯುತ್ತಮ ವೈದ್ಯ ಪ್ರಶಸ್ತಿ, ಪಡೆದಿದ್ದರು. ಡಾ.ಟಿಎಂಎ ಪೈಯವರ ನಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ೨ ನೇ ಕರ್ನಾಟಕ ರಾಜ್ಯದ ಐಎಂಎ ಅಧ್ಯಕ್ಷರಾದ ಇವರ ಮುಂದಾಳತ್ವದಲ್ಲಿ ಇತ್ತೀಚೆಗೆ ಅಕ್ಟೋಬರ್ ೨೮,೨೯ ರಂದು ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ಸಭಾಭವನದಲ್ಲಿ ಐಎಂಎ ರಾಜ್ಯ ಸಮ್ಮೇಳನ ಅಭೂತಪೂರ್ವವಾಗಿ ನೇರವೇರಿಸಿ ಎಲ್ಲರ ಶ್ಲಾಘನೆ ಪಡೆದಿದ್ದರು.