ಕಾಪು: ತಾಲೂಕಿನಲ್ಲಿ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದ್ದು ಲಕ್ಷಾಂತರ ರೂಪಾಯಿ ಮೊತ್ತದ ಸೊತ್ತು ನಷ್ಟವುಂಟಾಗಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಮತ್ತೆ ನೆರೆಯ ಭೀತಿ ಎದುರಾಗಿದೆ. ಇನ್ನಂಜೆ – ಮರ್ಕೋಡಿ ಹೊಳೆ ಬಳಿ, ಕಾಪು ಜನಾರ್ದನ ದೇವಸ್ಥಾನದ ಬಳಿ, ಮಲ್ಲಾರು – ಮೂಳೂರು – ಬೆಳಪು ಬೈಲ್, ಉಳಿಯಾರಗೋಳಿ ಕೈಪುಂಜಾಲು ಬೈಲು ಮುಳುಗಡೆಯಾಗಿದೆ.
ಕಳೆದ ಎರಡು ವಾರಗಳ ಹಿಂದೆ ನಿರಂತರ ಮಳೆಯಿಂದಾಗಿ ನೆರೆ ಕಂಡು ಬಂದಿದ್ದ ತಗ್ಗು ಪ್ರದೇಶಗಳಲ್ಲಿ ನೆರೆ ಇಳಿಮುಖವಾದ ಬಳಿಕ ಭತ್ತದ ಕೃಷಿ ಕೆಲಸಗಳು ಬಿರುಸಿನಿಂದ ನಡೆದಿದ್ದವು. ಆದರೆ ಇದೀಗ ಮತ್ತೆ ಭಾರೀ ಮಳೆ ಸುರಿದ ಪರಿಣಾಮ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು ನೂರಾರು ಹೆಕ್ಟೇರ್ ಕೃಷಿ ಗದ್ದೆಗಳಲ್ಲಿ ನಡೆಸಲಾಗಿರುವ ಭತ್ತದ ನಾಟಿ ಕೊಳೆಯುವ ಭೀತಿ ಎದುರಾಗಿದೆ. ಕೃಷಿ ಕಾರ್ಯಕ್ಕೆ ಕೆಲಸದವರ ಕೊರತೆ, ದುಬಾರಿ ವೆಚ್ಚದ ನಡುವೆ ಕೃಷಿ ಕಾರ್ಯ ಮಾಡುವ ಕೃಷಿಕರಿಗೆ ವರುಣನ ಕಣ್ಣ ಮುಚ್ಚಾಲೆ ಆಟಕ್ಕೆ ಕಂಗಲಾಗಿದ್ದಾರೆ.
ಮಳೆ ಹಾನಿ ಮತ್ತು ನೆರೆ ಪೀಡಿತ ಪ್ರದೇಶಗಳಿಗೆ ಕಾಪು ಶಾಸಕರು, ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.