ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ನೂರಕ್ಕೆ ನೂರು ನನಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಬಿಜೆಪಿ ಟಿಕೆಟ್ ಪಡೆಯಲು ನನಗೆ ಕಷ್ಟ ಇಲ್ಲ ಎಂದು ಶಾಸಕ ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕತ್ವದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನಾನು ತಳಮಟ್ಟದಿಂದ ಬಂದವನು. ಬಿಜೆಪಿಯ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದವನು. ಹಾಗಾಗಿ ಬಿಜೆಪಿ ಸಿಸ್ಟಮ್ ಹೇಗಿದೆಂಬುವುದು ನನಗೆ ಚೆನ್ನಾಗಿ ಗೊತ್ತಿದೆ ಎಂದರು.
ಬದಲಾವಣೆ ಯಾರನ್ನು ಮಾಡಬಹುದು ಅಂದ್ರೆ, ಕೆಲಸ ಮಾಡದ ಶಾಸಕನನ್ನು ಬದಲಾವಣೆ ಮಾಡಬಹುದು. ನಾನು ನಿರಂತರವಾಗಿ ಜನರ ಜೊತೆ ಸಂಪರ್ಕ ಇಟ್ಟುಕೊಂಡು, 224 ಕ್ಷೇತ್ರಗಳಲ್ಲಿ ಮಾಡದಿದ್ದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಉಡುಪಿ ಕ್ಷೇತ್ರದಲ್ಲಿ ಮಾಡಿದ ಶಾಸಕ. ಆದ್ದರಿಂದ ಚುನಾವಣೆಯಲ್ಲಿ ನೂರಕ್ಕೆ ನೂರು ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿಯೇ ಇಲ್ಲ ಎನ್ನುವಂತಹ ರೀತಿಯಲ್ಲಿ ಬಿಜೆಪಿ ಬೆಳೆದಿದೆ. ಅದಕ್ಕೆ ಕಾರಣ ನಾನು ಮೂರು ಬಾರಿ ಶಾಸಕನಾಗಿ ತಳಮಟ್ಟದ ಕಾರ್ಯಕರ್ತರನ್ನು ಬೆಳೆಸಿದ್ದೇನೆ. ಜನರ ವಿಶ್ವಾಸವನ್ನು ಗಳಿಸಿದ್ದೇನೆ. ಪಕ್ಷ ಯಾವ ನಿರ್ಧಾರ ಕೈಗೊಂಡರೂ ಅದಕ್ಕೆ ನಾನು ಸಿದ್ದವಾಗಿದ್ದೇನೆ. ಹಾಗಿದ್ದರೂ ಪಕ್ಷ ನನಗೆ ಟಿಕೆಟ್ ನೀಡುತ್ತೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.