ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಹಿಂದುತ್ವ ಹೆಸರಿನಲ್ಲಿ ಸಂಘಟನೆಯೊಂದನ್ನು ಹುಟ್ಟು ಹಾಕಿ ಸರ್ವಾಧಿಕಾರಿಯಾಗಿ ತನ್ನದೇ ನಿರ್ಣಯಗಳನ್ನು ಕೈಗೊಂಡು, ಬೇಕು-ಬೇಡದ ವಿಚಾರಗಳಲ್ಲಿ ಮೂಗು ತುರಿಸಿ ಅಮಾಯಕರನ್ನು ವಿವಿಧ ಪ್ರಕರಣಗಳಲ್ಲಿ ಸಿಲುಕಿಸಿ ಜೈಲು, ನ್ಯಾಯಾಲಯಗಳನ್ನು ಅಲೆದಾಡುವಂತೆ ಮಾಡಿದ ಸಂಘಟನೆಯೊಂದರ ಪ್ರಮುಖ ವ್ಯಕ್ತಿಯನ್ನು ಚುನಾವಣೆಯಲ್ಲಿ ಬೆಂಬಲಿಸಕೂಡದೆಂದು ಶ್ರೀರಾಮ ಸೇನೆ ಮಾಜಿ ಮುಖಂಡ ಎಂದು ಹೇಳಿಕೊಳ್ಳುವ ರವಿ ವಿ.ಸಿದ್ಲಿಂಗ್ ಹೇಳಿದರು.
ನಗರದ ಹೋಟೆಲ್ ಪ್ರಕಾಶ್ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರು, ಹಿಂದುತ್ವದ ಭ್ರಮೆಗೆ ಸಿಲುಕಿ ನಾವೆಲ್ಲ ಮನೆ-ಮಠ, ಹೆತ್ತವರಿಂದ ದೂರಾಗಿದ್ದೇವೆ. ಇವರ ಸಂಘಟನೆಯಲ್ಲಿ ಹತ್ತಾರು ವರ್ಷ ದುಡಿದ ಮೇಲೆ ಸಮಾಜದ್ರೋಹದ ಕೃತ್ಯಗಳನ್ನು ಕಂಡು ಹೇಸಿದ್ದೇವೆ. ನಯವಂಚನೆಯ ಮತ್ತು ನವರಂಗಿ ಆಟಗಳು ಉತ್ತರ ಕರ್ನಾಟಕದ ಹೆಚ್ಚಿನ ಹಿಂದುಗಳು ಅರಿತುಕೊಂಡಿದ್ದಾರೆ. ಕರಾವಳಿಯ ಅಮಾಯಕ ಯುವ ಸಮುದಾಯ ಇದಕ್ಕೆ ಬಲಿಯಾಗಬಾರದೆಂದು ಕೋರಿದ್ದಾರೆ.
ನಂಬಿ ಕೆಟ್ಟೆವು…!
ಸಂಘಟನೆಯ ಪ್ರಮುಖರ ಒಬ್ಬರ ಭಾಷಣಕ್ಕೆ ಮಾರು ಹೋಗಿ ಅಮಾಯಕರು ಜೈಲು ಪಾಲಾಗಿ ನ್ಯಾಯಾಲಯಗಳನ್ನು ಅಲೆದಾಡುವ ಪ್ರಸಂಗ ಎದುರಿಸಬೇಕಾಯಿತು. ಈ ಅವಧಿಯಲ್ಲಿ ಮನೆಮಂದಿಯಿಂದ ದೂರವಾಗಿ ಹಿಂದುತ್ವಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದೇವೆ. ಭವಿಷ್ಯವನ್ನೇ ಹಾಳುಮಾಡಿಕೊಂಡಿದ್ದೇವೆ. ನಂತರ ದಿನಗಳಲ್ಲಿ ಸ್ವಯಂಘೋಷಿತ ಹಿಂದುತ್ವವಾದಿ ನಮ್ಮನ್ನು ತಿರುಗಿಯೂ ನೋಡಿಲ್ಲ. ಈ ಎಲ್ಲ ವಿವರಗಳು ಯುವ ಸಮುದಾಯಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ಕಾರ್ಕಳಕ್ಕೆ ಅಗಮಿಸಿದ್ದೇವೆ ಎಂದರು.
ಯಾವುದೇ ಪಕ್ಷದ ಪರವಾಗಿ ಬಂದಿಲ್ಲ
ಮೇಲಿನ ವಿಚಾರವನ್ನು ಮುಂದಿಟ್ಟು ಜನಜಾಗೃತಿ ಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಕಳಕ್ಕೆ ಅಗಮಿಸಿದ್ದೇವೆ ಹೊರತು ಯಾವುದೇ ಪಕ್ಷದ ಪರವಾಗಿ ನಾವಿಲ್ಲಿ ಬಂದಿಲ್ಲ. ಅದರ ಅಗತ್ಯವೂ ನಮಗೆ ಬಂದಿಲ್ಲ ಎಂದರು.
ಶ್ರೀರಾಮಸೇನೆಯ ಮಾಜಿ ಮುಖಂಡರು ಎನ್ನಲಾದ ವಿಲಾಸ ರಾವ್ ಪವಾರ್, ವಿವೇಕ್ ಪೂಜಾರ್, ಜ್ಯೋತಿಭಾ ಖಾಬುಲೆ, ಶಿವಶಂಕರ್ ಖಾನಾಪುರ್, ಉಮೇಶ್ ಆಲ್ಮೇಲ್ಕರ್, ಮಹೇಶ್ ಅರಾಕೇರಿ ಮೊದಲಾದವರು ಉಪಸ್ಥಿತರಿದ್ದರು.