ಉಡುಪಿ: ಬೃಹತ್ ಗಾತ್ರದ ಹೆಬ್ಬಾವೊಂದನ್ನು ಸ್ಥಳೀಯರೇ ಸೇರಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಉಡುಪಿ ಜಿಲ್ಲೆಯ ಅಕ್ಕುಂಜೆ ಎಂಬಲ್ಲಿ ನಡೆದಿದೆ.
ಅಕ್ಕುಂಜೆ ಪರಿಸರದ ಮನೆಯ ತೋಟದಲ್ಲಿ ಸುಮಾರು 15 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು. ಇದನ್ನು ನೋಡಿದ ಕೃಷಿಕರು, ಸ್ಥಳೀಯ ಯುವಕರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಯುವಕರು ಹೆಬ್ಬಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಭಾರೀ ಹರಸಾಹಸಪಟ್ಟು ಹಿಡಿದ ಹೆಬ್ಬಾವನ್ನು ಗೋಣಿ ಚೀಲದಲ್ಲಿ ತುಂಬಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಯುವಕರ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.