ಕುಂದಾಪುರ: ಬಿಜೆಪಿ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮುಖಂಡರುಗಳು ವಾರ್ಡಿನ ಜವಾಬ್ದಾರಿಯನ್ನು ಪಡೆದುಕೊಂಡು ಮತದಾರರ ಮನೆ ಮನೆಗೆ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೊಜನೆಗಳ ಬಗ್ಗೆ ಮಾಹಿತಿಯನ್ನು ನೀಡುವಂತ ಕೆಲಸ ಮಾಡಬೇಕು.ಪ್ರತಿ ಮಹಾಶಕ್ತಿ ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಿ ಚುನಾವಣಾ ರಂಗಕ್ಕೆ ಶಕ್ತಿಯನ್ನು ತುಂಬಬೇಕು.ನಮ್ಮೆಲ್ಲರ ಒಗ್ಗಟ್ಟಿನ ಹೋರಾಟದಿಂದ ಅಪೂರ್ವ ವ್ಯಕ್ತಿತ್ವವನ್ನು ಹೊಂದಿರುವ ಸಮಾನ್ಯ ಕಾರ್ಯಕರ್ತ ಗುರುರಾಜ್ ಗಂಟಿಹೊಳೆ ಗೆಲುವನ್ನು ಕಾಣುವಂತೆ ಆಗಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೈಂದೂರು ಬಿಜೆಪಿ ಮಂಡಲದ ವತಿಯಿಂದ ಕೊಂಕಣ ಖಾರ್ವಿ ಸಭಾಂಗಣದಲ್ಲಿ ಸೋಮವಾರ ನಡೆದ ಬೈಂದೂರು ವಿಧಾನಸಭೆ ಕ್ಷೇತ್ರದ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಸಭೆಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು,ಗೋವುಗಳ ಆರೈಕೆಗೆ ಗೋಶಾಲೆ ನಿಮಾಣ,ಆರೋಗ್ಯ,ಕೃಷಿ,ಶಿಕ್ಷಣ,ಉದ್ಯೋಗ ಭರವಸೆ ಯೋಜನೆ,ಪ್ರವಾಸೋದ್ಯಮ,ಮೀನುಗಾರಿಕೆ ಸೇರಿದಂತೆ ಒಟ್ಟು 8 ರೀತಿಯ ವಿಶೇಷ ಯೋಜನೆಗಳನ್ನು ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಣಾಳಿಕೆಯನ್ನು ಸಿದ್ದಪಡಿಸಲಾಗಿದೆ ಡಬಲ್ ಇಂಜಿನ್ ಸರಕಾರ ಬೈಂದೂರು ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲಿದೆ ಎಂದರು.
ಪಂಚಾಯತ್ ವ್ಯವಸ್ಥೆಗೆ 15ನೇ ಹಣಕಾಸು ಯೋಜನೆಯ ಮೂಲಕ ವಿಶೇಷ ಅನುದಾನವನ್ನು ನೀಡಿ ಡಬಲ್ ಇಂಜಿನ್ ಸರಕಾರ ಮಹತ್ತರವಾದ ಕೆಲಸವನ್ನು ಮಾಡಿದೆ.ಬಿಜೆಪಿ ಸರಕಾರದ ಅವಧಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಗೌರವಧನವನ್ನು ಹೆಚ್ಚಿಸುವ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.ಸುಳ್ಳು ಭರವಸೆಗಳಿಂದ ಕೂಡಿದ ಕಾಂಗ್ರೆಸ್ ಪ್ರಣಾಳಿಕೆಯನ್ನು ಯಾವುದೇ ಕಾರಣಕ್ಕೂ ಈಡೇರಿಕೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ ಪಕ್ಷ ಧೈರ್ಯ ನೀಡಿದ್ದರಿಂದ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಾ ಇದ್ದೇನೆ.ಸಾಮಾನ್ಯ ಕಾರ್ಯಕರ್ತನಿಗೆ ಸಮಾಜ ಸೇವೆ ಮಾಡಲು ಒಂದು ಅವಕಾಶ ನೀಡಬೇಕು.ಜನರ ಕಷ್ಟ,ಸುಖಕ್ಕೆ ಸ್ಪಂದಿಸುವ ಕೆಲಸ ಸದಾ ಮಾಡಲಾಗುವುದು ಎಂದರು.
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ರಾಜ್ಯ ಓಬಿಸಿ ಮೋರ್ಚಾದ ಕಾರ್ಯದರ್ಶಿ ಡಾ.ಗೋವಿಂದ ಬಾಬು ಪೂಜಾರಿ,ಬ್ರಿಜೇಸ್ ಚೌಟ,ಪ್ರಿಯದರ್ಶಿನಿ ದೇವಾಡಿಗ,ಆನಂದ ಖಾರ್ವಿ,ಪ್ರಣಾಳಿಕೆ ಸಮಿತಿ ಅಧ್ಯಕ್ಷ ಚಿಟ್ಟೆ ರಾಜಗೋಪಾಲ ಹೆಗ್ಡೆ ಉಪಸ್ಥಿತರಿದ್ದರು.