ಮಂಗಳೂರು: ಉಚ್ಚಿಲದಲ್ಲಿ ಸಮುದ್ರ ಕೊರೆತ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ವಾಪಸ್ ಹೋದ ಬಳಿಕ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಸದಾಶಿವ ಉಳ್ಳಾಲ್ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.
ಉಚ್ಚಿಲದ ಮಳೆಹಾನಿ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆ ನಮಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಸಿಎಂ ಸ್ಥಳದಿಂದ ತೆರಳಿದ ಬಳಿಕ ಉಳ್ಳಾಲ್ ಅವರನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂಗೆ ನಮ್ಮ ಸಮಸ್ಯೆ ಹೇಳ ಬೇಕತ್ತು, ಆದರೆ ಅದಕ್ಕೆ ಅವಕಾಶವೇ ಸಿಕ್ಕಿಲ್ಲ. ಸುಮ್ಮನೆ ಬಂದು ಹೋಗುವುದಾದರೆ ಪರಿಹಾರವಿಲ್ಲವೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಎಲ್ಲ ಮುಖಂಡರು ಆಗಾಗ್ಗೆ ಭರವಸೆ ನೀಡುತ್ತೀರಾ ಆದರೆ ಶಾಶ್ವತ ಪರಿಹಾರ ನಮಗೆ ಯಾವಾಗ?. ಸಿದ್ದರಾಮಯ್ಯ ಕೂಡ ಭರವಸೆ ಕೊಟ್ಟು ಹೋಗಿದ್ದಾರೆ. ನಾವು ಮೀನುಗಾರ ಕುಟುಂಬದವರು ಇಲ್ಲಿ ಹೇಗೆ ಬದುಕಬೇಕು. ಕಡಲ್ಕೊರೆತ ಹೆಚ್ಚಾದಾಗ ಗಂಜಿ ಕೇಂದ್ರಕ್ಕೆ ಹೋಗಿ ಎನ್ನುತ್ತಾರೆ. ನಮಗೆ ನಿಮ್ಮ ಗಂಜಿ ಬೇಡ, ಸರಿಯಾಗಿ ಬದುಕಲು ಬಿಡಿ ಎಂದು ಸದಾಶಿವ ಉಳ್ಳಾಲ್ ಅವರನ್ನು ತರಾಟೆಗೆತ್ತಿಕೊಂಡರು.