ಬೈಂದೂರು: ನಾಡ ಗ್ರಾ.ಪಂ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು 5 ಸೆಂಟ್ಸ್ ಕಾಲನಿಯಲ್ಲಿ ಶಿಥಿಲಾವ್ಯಸ್ಥೆಯಲ್ಲಿರುವ ಗುಡಿಸಲಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಚಂದು ಪೂಜಾರ್ತಿ (70) ಅವರಿಗೆ ಸಮಾನ ಮನಸ್ಥಿತಿ ಯುವಕರ ತಂಡ ಸುಸಜ್ಜಿತವಾಗಿ ಮನೆಯನ್ನು ನಿರ್ಮಿಸಿ ಕೊಟ್ಟಿದೆ.
ಲಯನ್ಸ್ ಕ್ಲಬ್ ನಾವುಂದ, ಅಜ್ಜಿ ಮನೆ ಕನಸು ನನಸು ಮಾಡೋಣ ವಾಟ್ಸಾಪ್ ಗ್ರೂಪ್, ನಾಡ ಗ್ರಾ.ಪಂ ಹಾಗೂ ಪತ್ರಕರ್ತರ ಮಿತ್ರ ಸಹಕಾರದಿಂದ ಬುಧವಾರ ಅಜ್ಜಿ ಮನೆ ಮಂಜುನಾಥ ನಿಲಯ ಉದ್ಘಾಟನೆಗೊಂಡಿತು.
ಗಂಗೊಳ್ಳಿ ಪೊಲೀಸ್ ಎಸೈ ವಿನಯ್ ಕೊರ್ಲಹಳ್ಳಿ ಅಜ್ಜಿ ಮನೆಯ ನೂತನ ನಾಮಫಲಕ ಉದ್ಘಾಟಿಸಿದರು.
ಲಯನ್ಸ್ ಕ್ಲಬ್ ನಾವುಂದದ ಅಧ್ಯಕ್ಷ ಜಗದೀಶ್ ಕುದ್ರಕೋಡು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ನಾವು ನಾವುಂದ ಲಯನ್ಸ್ ಕ್ಲಬ್ ವತಿಯಿಂದ ಕೋರೆನಾ ಸಮಯದಲ್ಲಿ ಈ ಭಾಗದಲ್ಲಿ ಆಹಾರದ ಕಿಟ್ ವಿತರಣೆಯ ಸಮಯದಲ್ಲಿ ಅಜ್ಜಿಯ ಮನೆ ನೋಡಿ, ಬಹಳ ಬೇಸರಗೊಂಡು, ಈ ಅಜ್ಜಿಗೊಂದು ಮನೆ ನಿರ್ಮಿಸಿಕೊಡಬೇಕು ಎಂದು ವಾಟ್ಸಾಪ್ ಗ್ರೂಪ್ ರಚಿಸಿ, ಅಲ್ಲಿ ಸಮಾನ ಮನಸ್ಥಿತಿ ಯುವಕರನ್ನು ರಚಿಸಿಕೊಂಡು ಹಾಗೂ ದಾನಿಗಳ ಸಹಕಾರದಿಂದ ಚಂದು ಪೂಜಾರ್ತಿ ಅಜ್ಜಿಯ ಮನೆಯನ್ನು ನನಸು ಮಾಡಿದ ಸಂತೋಷವಿದೆ ಎಂದರು.
ಲಯನ್ಸ್ ಕ್ಲಬ್ ವಲಯ ಉಪಾಧ್ಯಕ್ಷ ನರಸಿಂಹ ದೇವಾಡಿಗ ಚಂದು ಪೂಜಾರ್ತಿ ಅಜ್ಜಿಗೆ ಕೀ ಹಸ್ತಾಂತರಿಸಿದ್ದರು.
ನಾಡ ಗ್ರಾ.ಪಂ ಸದಸ್ಯ ಉದಯ ಜೋಗಿ, ಲಯನ್ಸ್ ಕ್ಲಬ್ ನಾವುಂದದ ನೂತನ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಉದ್ಯಮಿ ಸಂಮರ್ ಶೆಟ್ಟಿ, ಮಂಜುನಾಥ ಪೂಜಾರಿ ಬೆಳ್ಳಾಡಿ, ಕಾಮೇಶ್ ದೇವಾಡಿಗ, ರಾಜು ಬೀಡಿ ಇದ್ದರು.
ಅಜ್ಜಿ ಮನೆ ಕನಸು ನನಸು ಮಾಡೋಣ ವಾಟ್ಸಾಪ್ ಗ್ರೂಪ್ ಸದಸ್ಯ ಪುರುಷೋತ್ತಮ್ ದಾಸ್ ಉಪ್ಪುಂದ ಸ್ವಾಗತಿಸಿದರು, ಪತ್ರಕರ್ತ ಜಗದೀಶ್ ದೇವಾಡಿಗ ಪ್ರಾಸ್ತಾವಿಕ ಮಾತನಾಡಿದರು, ಲಯನ್ಸ್ ಕ್ಲಬ್ ನಾವುಂದದ ಕಾರ್ಯದರ್ಶಿ ದಿನೇಶ್ ಆಚಾರ್ಯ ಉಳ್ಳೂರು ಕಾರ್ಯಕ್ರಮ ನಿರ್ವಹಿಸಿದ್ದರು, ಪತ್ರಕರ್ತ ಜಯಪ್ರಕಾಶ್ ಬಡಾಕೆರೆ ವಂದಿಸಿದ್ದರು.