ಉಡುಪಿ: ಕಲ್ಸಂಕದ ಬಳಿ ಪಾಳುಬಿದ್ದ ಕಟ್ಟಡದಲ್ಲಿ ಅನುಮಾನಸ್ಪದ ರೀತಿಯಲ್ಲಿ ಕಂಡುಬಂದ ಯುವಕನ ಮೃತದೇಹದ ಗುರುತು ಪತ್ತೆಯಾಗಿದೆ. ಮೃತದೇಹದ ಗುರುತು ಪತ್ತೆಹಚ್ಚುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತನನ್ನು ಹೆಬ್ರಿ ಅಂಡಾರು ಗ್ರಾಮದ ಮುತ್ತು ಕುಟ್ಟನ್ ಅವರ ಮಗ ಅವಿನಾಶ್ ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಕಲ್ಸಂಕದ ಪಾಳುಬಿದ್ದ ಕಟ್ಟಡದಲ್ಲಿ ಯುವಕನ ಮೃತದೇಹ ಸಿಕ್ಕಿದ್ದು, ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮೃತದೇಹವನ್ನು ರಕ್ಷಿಸಿ ಇಡಲಾಗಿತ್ತು. ಇಂದು ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಮತ್ತು ಹೆಡ್ ಕಾನ್ ಸ್ಟೆಬಲ್ ಹರೀಶ್ ನಾಯ್ಕ್ ಅವರು ಕಾನೂನು ಪ್ರಕ್ರಿಯೆ ನಡೆಸಿದರು.
ಮೃತನ ಸಂಬಂಧಿಕರಿಗೆ ಅಂತ್ಯಸಂಸ್ಕಾರ ನಡೆಸಲು ಅಸಹಾಯಕತೆ ಎದುರಾದಾಗ ಪೊಲೀಸರು ಸಹಕಾರದೊಂದಿಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಇಂದ್ರಾಳಿ ರುದ್ರಭೂಮಿಯಲ್ಲಿ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಯಿತು. ಪ್ಲಾವರ್ ವಿಷ್ಣು, ಯತೀಶ್ ಕಡಿಯಾಳಿ ಸಹಕರಿಸಿದರು.