ಉಡುಪಿ: ಇವತ್ತು ಕುಟುಂಬದ ಆಧಾರದಲ್ಲಿ ಮುಖ್ಯಮಂತ್ರಿ ಆಗುವಂತಹ ಅರ್ಹತೆ ಹೊಂದಿದ್ದರೆ, ಅದು ಜೆಡಿಎಸ್ ನಲ್ಲಿ ಮಾತ್ರ. ಬಿಜೆಪಿಯಲ್ಲಿ ಕುಟುಂಬದ ಆಧಾರಿತವಾಗಿಯೂ ಮುಖ್ಯಮಂತ್ರಿ ಆಗುವುದಿಲ್ಲ, ಜಾತಿಯ ಆಧಾರಿತವಾಗಿಯೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಕುಮಾರಸ್ವಾಮಿಯ ಬ್ರಾಹ್ಮಣ ಸಿಎಂ ಹೇಳಿಕೆಗೆ ಉಡುಪಿಯಲ್ಲಿಂದು ಅವರು ಪ್ರತಿಕ್ರಿಯೆ ನೀಡಿದರು.
ನಮ್ಮ ಪಕ್ಷದಲ್ಲಿ ನಿಷ್ಠೆ ಇರಬೇಕು, ಅನುಭವ ಇರಬೇಕು.ಇದರ ಆಧಾರದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ವಿನಃ ಯಾರದ್ದೊ ಮಗ ಎನ್ನುವ ಕಾರಣಕ್ಕೆ, ಯಾವುದೋ ಜಾತಿಯ ಎನ್ನುವ ಕಾರಣಕ್ಕೆ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲ್ಲ ಎಂದು ತಿರುಗೇಟು ನೀಡಿದರು.
ಬ್ರಾಹ್ಮಣ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಕೀಳಾಗಿ ಮಾತನಾಡುವುದು ಓರ್ವ ಮುಖ್ಯಮಂತ್ರಿ ಆಗಿದ್ದವರಿಗೆ ಶೋಭೆ ತರುವುದಿಲ್ಲ. ಯಾರಿಗೆ ಅರ್ಹತೆ ಇದೆ ಅಂಥವರು ಯಾರು ಬೇಕಾದ್ರೂ ಮುಖ್ಯಮಂತ್ರಿ ಅಗಬಹುದು. ಜಾತಿಯ ಆಧಾರದಲ್ಲಿ ಯಾಕೆ ಮುಖ್ಯಮಂತ್ರಿ ಮಾಡಬೇಕು ಎಂದು ಪ್ರಶ್ನಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ರಾಜ್ಯದ ಅಭಿವೃದ್ಧಿಯನ್ನು ಕಣ್ಣು ಮುಂದೆ ಇಟ್ಟುಕೊಂಡು ಯಾವುದೇ ಚುನಾವಣೆಯನ್ನು ಮಾಡಿಲ್ಲ. ಜಾತಿಯ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿವೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಕರ್ನಾಟಕದಲ್ಲಿ ಬಿಜೆಪಿ ಸರಕಾರವೇ ಬರುತ್ತದೆಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬಿಜೆಪಿ ಸರಕಾರ ಬಂದ ನಂತರ ನಮ್ಮ ನಾಯಕ ಯಾರಾಗಬೇಕೆಂದು ನಮ್ಮ ಶಾಸಕಾಂಗ ಪಕ್ಷ ಸಭೆ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.