ಕುಂದಾಪುರ: ಕೊಡೇರಿ ಸಮುದ್ರ ತೀರದಲ್ಲಿ ಶುಕ್ರವಾರ ಆಗಸ್ಟ್ 5ರಂದು ಮತ್ತೊಂದು ದೋಣಿ ಅವಘಡ ಸಂಭವಿಸಿದೆ. ಭಾರಿ ಅಲೆಗಳಿಗೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್, ಅದರಲ್ಲಿದ್ದ ಎಲ್ಲಾ ಒಂಬತ್ತು ಮೀನುಗಾರರನ್ನು ಇತರ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. 1.5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ದೋಣಿಯಿಂದ ಸುಮಾರು 10 ಮೀಟರ್ ದೂರದಲ್ಲಿದ್ದ ಮೀನುಗಾರ ಕುಪ್ಪಯ್ಯ ಬಲೆಯಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಕಷ್ಟಪಟ್ಟು ಹೊರತೆಗೆಯಲಾಗಿದೆ. ಮುಳುಗಿದ ಶ್ರೀ ದುರ್ಗಾಪರಮೇಶ್ವರಿ ದೋಣಿಯ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ಆರು ದೋಣಿಗಳ ಮೀನುಗಾರರು ಕಾರ್ಯಪ್ರವೃತ್ತರಾಗಿ ಎಲ್ಲಾ ಮೀನುಗಾರರನ್ನು ರಕ್ಷಿಸಿದ್ದಾರೆ. ಜುಲೈ 31 ರಂದು ಇದೇ ಸ್ಥಳದಲ್ಲಿ ದೋಣಿ ಮಗುಚಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದರು.