ಕಾರವಾರ: ವರ್ಷದಲ್ಲಿ ಒಂದು ವಾರಗಳ ಕಾಲ ಮಾತ್ರ ಬಾಗಿಲು ತೆರೆಯುವ ಇಲ್ಲಿನ ಹಣಕೋಣ ಸಾತೇರಿ ದೇವಿಯ ಜಾತ್ರಾ ಮಹೋತ್ಸವ ಸೆಪ್ಟೆಂಬರ್ 13 ರಿಂದ 19 ರ ವರೆಗೆ ನಡೆಯಲಿದೆ. ಕೋವೀಡ್ ನಿಯಮಾವಳಿಗಳ ಪ್ರಕಾರ ಸರಳವಾಗಿ ಜಾತ್ರೆ ಆಚರಣೆಗೆ ನಿರ್ಧರಿಸಲಾಗಿದ್ದು ಸೆಪ್ಟೆಂಬರ್ 13 ರ ರಾತ್ರಿ ದೇವಾಲಯದ ಬಾಗಿಲು ತೆರೆಯಲಾಗುವುದು.
ಸೆಪ್ಟೆಂಬರ್ 14 ರಂದು ಕುಳಾವಿ ಜನರಿಂದ ಸೇವಾ ಕಾರ್ಯಕ್ರಮ ನಡೆಯಲಿದ್ದು ಸೆಪ್ಟೆಂಬರ್ 15 ರಿಂದ 19 ರ ವರೆಗೆ ಭಕ್ತಾದಿಗಳಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ 7 ದಿನಗಳ ಕಾಲ ಹಣಕೋಣ ಸಾತೇರಿ ದೇವಿಯ ದೇವಾಲಯದ ದ್ವಾರ ತೆರೆಯಲಾಗುತ್ತದೆ, ಕಾರವಾರ, ಅಂಕೋಲಾ, ಗೋವಾ ಭಾಗದ ಸಹಸ್ರಾರು ಭಕ್ತಾದಿಗಳು ದೇವಿಯ ದರ್ಶನ ಪಡೆದು ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ, ಏಳು ದಿನಗಳ ಜಾತ್ರಾ ಮಹೋತ್ಸವದ ನಂತರ ಹಾಕಿದ ದೇವಾಲಯದ ಬಾಗಿಲನ್ನು ಮತ್ತೆ ಮುಂದಿನ ವರ್ಷದಲ್ಲೇ ತೆರೆಯಲಾಗುತ್ತದೆ. ಸರ್ಕಾರದ ಕಠಿಣ ಕೋವೀಡ್ ನಿಯಮಾವಳಿಗಳಿಂದಾಗಿ ಈ ಬಾರಿ ಗೋವಾ ಭಾಗದ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.