ಕಾರವಾರ: ಭಾರತೀಯ ನೌಕಾಪಡೆಗಳ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವುದು ಯಾರ ವಿರುದ್ಧದ ಹೋರಾಟಕ್ಕಲ್ಲ. ರಾಷ್ಟ್ರದ ಹಿತಾಸಕ್ತಿಗಾಗಿ ಭಾರತೀಯ ನೌಕಾಪಡೆ ಸೇರಿದಂತೆ ರಕ್ಷಣಾ ಪಡೆಗಳ ಬಲ ವೃದ್ಧಿಸಲಾಗುತ್ತಿದೆ. ಇದರ ಮೂಲಕ ಭಾರತೀಯ ಕರಾವಳಿ ನಿವಾಸಿಗಳಿಗೆ ಶಾಂತಿ ಒದಗಿಸಲು ಮತ್ತು ಸೌಹಾರ್ದತೆಗಾಗಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಕಾರವಾರ ತಾಲೂಕಿನ ಅರ್ಗಾದ ಐ.ಎನ್. ಎಸ್. ಕದಂಬ ನೌಕಾನೆಲೆಯ ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ಸ್ವದೇಶಿ ನಿರ್ಮಿತ ಐ.ಎನ್.ಎಸ್ ಖಂಡೇರಿ ಜಲಾಂತರ್ಗಾಮಿಯಲ್ಲಿ ನಾಲ್ಕು ತಾಸು ಸಮುದ್ರ ಯಾನ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ವರ್ಷ ಆಚರಣೆಗೊಳ್ಳುತ್ತಿರುವ ಆಜಾ ದಿ ಕಾ ಅಮೃತ್ ಮಹೋತ್ಸವಕ್ಕಾಗಿ ಐಎನ್ಎಸ್ ವಿಕ್ರಾಂತ್ ಸಿದ್ಧಗೊಳ್ಳುತ್ತಿದೆ. ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ವಿಕ್ರಮಾದಿತ್ಯ ಎರಡೂ ಸೇರಿ ಭಾರತೀಯ ಸಾಗರ ರಕ್ಷಣೆಗೆ ಹೆಚ್ಚಿನ ಶಕ್ತಿ ನೀಡುತ್ತಿದೆ ಎಂಬ ವಿಶ್ವಾಸವಿದೆ. ಭಾರತೀಯ ನೌಕಾಪಡೆಯನ್ನು ಈಗ ಜಗತ್ತಿನ ಪ್ರಮುಖ ನೌಕಾಪಡೆಗಳ ಸಾಲಿನಲ್ಲಿ ನೋಡಲಾಗುತ್ತಿದೆ. ವಿಶ್ವದ ದೊಡ್ಡ ದೊಡ್ಡ ಪಡೆಗಳು ಕೂಡ ಈಗ ಭಾರತದ ಸಹಯೋಗಕ್ಕೆ ಕೈಚಾಚುತ್ತಿದೆ ಎಂದರು.
ಹಿಂದೂ ಮಹಾಸಾಗರದಲ್ಲಿರುವ ರಾಷ್ಟçಗಳ ನಡುವೆ ಶಾಂತಿ ಸಮೃದ್ಧಿಯನ್ನು ಸ್ಥಾಪಿಸುವದಕ್ಕಾಗಿ ಭಾರತೀಯ ರಕ್ಷಣಾ ಪಡೆಗಳ ಶಕ್ತಿ ವೃದ್ಧಿಸಲಾಗುತ್ತಿದೆ ಹೊರತು ಯಾವುದೇ ದೇಶವನ್ನು ಕೆರಳಿಸುವುದಕ್ಕಾಗಲಿ ಅಥವಾ ಅವರ ವಿರುದ್ಧವಲ್ಲ. ಭಾರತೀಯ ನೌಕಾಪಡೆ ಲೋಕಾರ್ಪಣೆಗೊಳಿಸಿರುವ ವಿವಿಧ ದೇಶೀಯ ನೌಕೆಗಳು ಹಾಗೂ ಶಸ್ತ್ರಾಸ್ತ್ರಗಳು ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಶಕ್ತಿ ನೀಡಿದೆ. ಐ.ಎನ್.ಎಸ್ ಖಂಡೇರಿ ಮೆಕ್ ಇನ್ ಇಂಡಿಯಾ ಅಡಿ ನಿರ್ಮಿಸಲಾದ ಅತ್ಯಾಧುನಿಕ ಸಬ್ ಮರಿನ್ಗಳಲ್ಲೊಂದಾಗಿದೆ. ಈಗಾಗಲೇ ಬೇಡಿಕೆ ಸಲ್ಲಿಸಲಾಗಿರುವ 41 ಸಬ್ ಮರಿನ್ಗಳಲ್ಲಿ 39 ಸಬ್ ಮರಿನ್ಗಳು ಭಾರತೀಯ ಶಿಪ್ಯಾರ್ಡ್ ನಲ್ಲಿ ತಯಾರಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಸಂಪೂರ್ಣ ಭಾರತೀಯ ನಿರ್ಮಿತ ಅತ್ಯಾಧುನಿಕ ಏರ್ಕ್ರಾಪ್ಟ್ ಕ್ಯಾರಿಯರ್ ಐ.ಎನ್.ಎಸ್ ವಿಕ್ರಾಂತ್ ನೌಕಾಪಡೆಗೆ ಸದ್ಯದಲ್ಲಿಯೇ ಸೇರ್ಪಡೆಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಐ.ಎನ್.ಎಸ್ ವಿಕ್ರಾಂತ ಮತ್ತು ಐ.ಎಸ್.ಎಸ್ ವಿಕ್ರಮಾದಿತ್ಯ ಭಾರತೀಯ ನೌಕಾಪಡೆಗೆ ಹೆಚ್ಚಿನ ಬಲ ನೀಡಲಿದೆ ಎಂದರು.
ಇಂದು ಭಾರತೀಯ ನೌಕಾದಳದ ಹೆಸರನ್ನು ವಿಶ್ವದ ಪ್ರಮುಖ ನೌಕಾಪಡೆಯೊಂದಿಗೆ ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ನೌಕಾಪಡೆಯು ವಿಶ್ವದಲ್ಲಿ ಅತ್ಯುತ್ತಮವಾದ ಗೌರವ ಹೊಂದಿದ್ದು, ಅಮೆರಿಕ ಸೇರಿದಂತೆ ಪ್ರಮುಖ ದೇಶಗಳ ನೌಕಾಪಡೆಯು ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ ಎಂದರು.
ಈ ಸಂದರ್ಭದಲ್ಲಿ ನೌಕಾಪಡೆಯ ಮುಖ್ಯಸ್ಥ ಆರ್.ಹರಿಕುಮಾರ್, ಪಶ್ಚಿಮ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜೇಂದ್ರ ಬಹಾದೂರ್ ಸಿಂಗ್ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಇದ್ದರು.