ಉಡುಪಿ: ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಜವಾಬ್ ಚಂಡಮಾರುತದ ಪರಿಣಾಮ ಉಡುಪಿಯಲ್ಲಿ ಕಳೆದ ರಾತ್ರಿ ವ್ಯಾಪಕ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಉಂಟಾಗಿದೆ. ಪರಿಣಾಮ ಉಡುಪಿ ನಗರದಲ್ಲಿ ರಾತ್ರೋರಾತ್ರಿ 30 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಮಂಗಳವಾರ ಸಂಜೆ 5ಗಂಟೆಗೆ ಆರಂಭವಾದ ಮಳೆ ಬಿಡದೇ ನಿರಂತರವಾಗಿ ಸುರಿದ ಪರಿಣಾಮ ನಗರದ ಮಧ್ಯೆ ಹರಿಯುವ ಇಂದ್ರಾಣಿ ಹೊಳೆಯಲ್ಲಿ ನೀರು ಏರಿಕೆಯಾಗಿದೆ. ಇದರಿಂದ ತಡರಾತ್ರಿ ನಗರದ ತಗ್ಗು ಪ್ರದೇಶಗಳಾದ ಕಲ್ಸಂಕ, ಬನ್ನಂಜೆ, ಮಠದ ಬೆಟ್ಟು, ಬೈಲಕೆರೆ ಮುಂತಾದ ಕಡೆಗಳಲ್ಲಿ ನೆರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತಡ ರಾತ್ರಿ 1 ಗಂಟೆಯ ವೇಳೆಗೆ ಉಡುಪಿ ಅಗ್ನಿಶಾಮಕ ದಳದ ವತಿಯಿಂದ ಕೃಷ್ಟಮಠ ಪಾರ್ಕಿಂಗ್ ಪ್ರದೇಶ ಆಸುಪಾಸಿನ ಆರು ಮನೆಯ 30 ಮಂದಿಯನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಯಿತು.
ತಗ್ಗು ಪ್ರದೇಶಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಭಾರೀ ನೆರೆ ಭೀತಿ ಉಂಟಾಗಿತ್ತು. ಕಳೆದ ವರ್ಷವೂ ಮುಂಗಾರು ಕೊನೆಯ ಅವಧಿಯಾದ ಸೆಪ್ಟೆಂಬರ್ ತಿಂಗಳಲ್ಲಿ ಉಡುಪಿ ನಗರವೂ ಸೇರಿದಂತೆ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಭೀಕರ ನೆರೆ ಸಂಭವಿಸಿತ್ತು. ಕಳೆದ ರಾತ್ರಿ ಸುರಿದ ಮಳೆಯೂ ಅದೇ ನೆರೆ ಭೀತಿಯನ್ನು ಸೃಷ್ಟಿತ್ತು. ಆದರೆ ಬೆಳಗ್ಗೆ ಹೊತ್ತಿಗೆ ನೆರೆ ಇಳಿಮುಖವಾಗಿದ್ದು, ಸದ್ಯ ಆತಂಕ ದೂರವಾಗಿದೆ.
ಬನ್ನಂಜೆಯ ಸಾರ್ವಜನಿಕ ನಾಗಬನದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದೆ. ಆದರೆ ಇಂದು ಇಡೀ ನಾಗಬನವೇ ಸಂಪೂರ್ಣ ಮುಳುಗಡೆಯಾಗಿದ್ದು, ಇಂದಿನ ಪೂಜೆ, ಉತ್ಸವವನ್ನು ರದ್ದುಪಡಿಸಲಾಗಿದೆ. ಶಿವಮೊಗ್ಗ ಸಹಿತ ನಾನಾ ನಡೆಯಿಂದ ಹರಕೆ ತೀರಿಸಲು ಬಂದವರು ವಾಪಸ್ಸಾಗಿದ್ದಾರೆ.
ನಗರದ ಹೊರ ವಲಯದ ಕೆಮ್ತೂರು ಹೊಳೆಯೂ ಉಕ್ಕಿ ಹರಿದ್ದು, ಕೆಮ್ತೂರು ಮತ್ತು ಕೊರಂಗ್ರಪಾಡಿ ಪರಿಸರದಲ್ಲಿಯೂ ನೆರೆ ನೀರು ತುಂಬಿಕೊಂಡಿತ್ತು. ಬೆಳಗ್ಗೆ ಉಡುಪಿ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.