ಉಡುಪಿ : ಸ್ಕೂಟರ್ ಮತ್ತು ಕೇರಳ ಕೆಎಸ್ಆರ್ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗರ್ಭಿಣಿ ಪುತ್ರಿ ಜತೆ ಎಎಸ್ಐ ಸಾವು ಮೃತಪಟ್ಟ ಘಟನೆ ಸಂತೆಕಟ್ಟೆ ಜಂಕ್ಷನ್ನಲ್ಲಿ ಸಂಭವಿಸಿದೆ.
ಗರಡಿಮಜಲು ನಿವಾಸಿ ಕರಾವಳಿ ಕಾವಲು ಪಡೆಯ ಎಎಸ್ಐ ಗಣೇಶ್ ಪೈ (58) ಹಾಗೂ ಇವರ ಹಿರಿಯ ಮಗಳು ಗಾಯತ್ರಿ (27) ಮೃತರು. ಗಾಯತ್ರಿಗೆ ಮೂರು ವರ್ಷದ ಹಿಂದೆ ವಿವಾಹವಾಗಿದ್ದು, ಗಂಡ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಸದ್ಯ ಮೂರು ತಿಂಗಳ ಗರ್ಭಿಣಿಯಾಗಿದ್ದ ಅವರು ತವರು ಮನೆಯಲ್ಲಿ ಮಾ.4ರಂದು ನಿಗದಿಯಾಗಿದ್ದ ಸಮಾರಂಭಕ್ಕೆ 2 ದಿನ ಮುಂಚಿತವಾಗಿ ಆಗಮಿಸುತ್ತಿದ್ದರು.
ಬುಧವಾರ ಬೆಳಗ್ಗೆ 5.30ಕ್ಕೆ ಗದಗದಿಂದ ಆಗಮಿಸಿದ್ದ ತಮ್ಮ ಮಗಳನ್ನು ಬಸ್ ತಂಗುದಾಣದಿಂದ ಮನೆಗೆ ಕರೆದುಕೊಂಡು ಸ್ಕೂಟರ್ನಲ್ಲಿ ತಂದೆ ಹೋಗುತ್ತಿದ್ದರು. ಈ ವೇಳೆ ಕೇರಳದಿಂದ ಕೊಲ್ಲೂರಿಗೆ ಹೋಗುತ್ತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸ್ಕೂಟರ್ಗೆ ಡಿಕ್ಕಿ ಹೊಡಿದ್ದಿದ್ದು, ತಂದೆ-ಮಗಳು ದುರ್ಮರಣ ಹೊಂದಿದ್ದಾರೆ.
ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ತೀರಾ ಎಡಬದಿಗೆ ಚಲಿಸಿದ ಬಸ್ ಗಣೇಶ್ ಪೈ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ತಂದೆ ಮತ್ತು ಮಗಳು ರಸ್ತೆ ಮೇಲೆ ಬಿದ್ದು, ಇಬ್ಬರ ತಲೆಗೂ ಗಂಭೀರ ಗಾಯವಾಗಿತ್ತು. ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಣೇಶ್ ಪೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.