ಕಾರವಾರ:ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯುವ ಹಿನ್ನೆಲೆ ಕಾಂಗ್ರೆಸ್ ನವರು ಬೇಕಂತಲೇ ನಿತ್ಯ ಒಂದೊಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಅಂಕೋಲಾ ತಾಲ್ಲೂಕಿನ ಅಚಿವೆಯಲ್ಲಿ ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 50 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಅವರಿದ್ದಾಗ ಏನು ನಡೆಯಿತು ಎಂಬುದನ್ನು ಹೇಳುತ್ತಿಲ್ಲ. ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವ ಪಕ್ಷಕ್ಕೂ ಇಷ್ಟು ವರ್ಷ ಆಡಳಿತ ನಡೆಸುವ ಅವಕಾಶ ದೊರೆತಿಲ್ಲ. ಮಾತ್ರವಲ್ಲದೇ ಅಮೆರಿಕಾ, ಲಂಡನ್ ದೇಶಗಳಲ್ಲಿಯೂ ಇಂತಹ ಅವಕಾಶ ಸಿಕ್ಕಿಲ್ಲ. ಹೀಗಿರುವಾಗ ಕಾಂಗ್ರೆಸ್ 50 ವರ್ಷದ ಆಡಳಿತದಲ್ಲಿ ಗರೀಬಿ ಹಠಾವೋ ಘೋಷಣೆಯೊಂದನ್ನು ಮಾಡಿರುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಬದಲಾಗಿ ಬಡವರನ್ನು ತುಳಿದಿದ್ದಾರೆ. ಇದೀಗ ಚುನಾವಣೆ ಬಂದಿರುವ ಹಿನ್ನೆಲೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ಇದು ಇನ್ನೂ ಹೆಚ್ಚಾಗಲಿದೆ. ಕಾಂಗ್ರೆಸ್ ನವರ ನಡೆ ಆಪಾದನೆಗಳ ಕಡೆ ಆಗಲಿದೆ ಎಂದರು.
ಇನ್ನು ಕಾಂಗ್ರೆಸ್ ನವರಿಗೆ ನೀವು ಏನು ಮಾಡಿದ್ರಿ ಎಂದು ಕೇಳಿದ್ರೆ ತಾವು ತಪ್ಪು ಮಾಡಿದ್ದೇವೆ, ನೀವು ಒಳ್ಳೇದು ಮಾಡ್ರಿ ಎಂದು ನಮಗೆ ಬುದ್ದಿವಾದ ಹೇಳುತ್ತಾರೆ. ಅವರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಇದೆ. ಆದರೆ ನಾವು ಇದೆಲ್ಲವನ್ನು ಮೀರಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಬುಲ್ಡೋಜರ್ ಸರ್ಕಾರ, ಜೆಸಿಬಿ ಸರ್ಕಾರ ಎಂದು ಟೀಕಿಸಿದರು. ಆದರೆ ಅಲ್ಲಿನ ಜನರು ಮತ್ತೆ ಅದೇ ಸರ್ಕಾರವನ್ನೇ ಆಯ್ಕೆ ಮಾಡಿದ್ದಾರೆ. ಗೋವಾದಲ್ಲಿ ಬಿಜೆಪಿ ಬರುವುದಿಲ್ಲ ಅಂದ್ರು. ಕಾಂಗ್ರೆಸ್ ನವರು ವಿಶೇಷ ವಿಮಾನದ ಮೂಲಕ ತೆರಳಿದ್ದರು. ಸರ್ಕಾರ ಮಾಡಲು 40 ಮಂದಿಯನ್ನು ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದರು. ಆದರೆ ಕಾಂಗ್ರೆಸ್ ಡಮಾರ್ ಅಂದಾಗ ವಿಶೇಷ ವಿಮಾನ ಅಲ್ಲ, ರೈಲಿನ ಮೂಲಕ ಆಗಮಿಸಿದ್ದಾರೆ ಎಂದರು.
ಇನ್ನು ಪ್ರತಿಭಟನೆ ವೇಳೆ ಡಿ.ಕೆ.ಶಿವಕುಮಾರ್ ಬ್ಯಾರಿಕೇಡ್ ಮೇಲೆ ಹತ್ತಿ ನಿಂತ ಘಟನ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಕಾಂಗ್ರೆಸ್ ನ ಅಧ್ಯಕ್ಷರು ಗೌರವ ಇಟ್ಟುಕೊಂಡು ಪ್ರತಿಭಟನೆ ಮಾಡಬೇಕು. ಹುಡುಗಾಟ ಮಾಡುವುದು ಒಳ್ಳೆಯದಲ್ಲ. ಮುಂದೆ ಇನ್ನು ಕೂಡ ಒಂದು ವರ್ಷ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.