ಮಂಗಳೂರು: ಕೈಕಾಲು ಇದ್ದು ಸದೃಢರಾಗಿರುವ ನಾವು ಮಾಡುವ ವೇದಿಕೆಯ ಕಲೆ ಪ್ರಸ್ತುತಿಗೂ ವಿಕಲಚೇತನರು ಪೂಜ್ಯ ಭಾವನೆಯ ರೀತಿಯಲ್ಲಿ ಮಾಡುವ ಕಲಾ ಪ್ರದರ್ಶನಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ವಿಕಲಚೇತನರು ಮಾಡುವ ಈ ಅದ್ಭುತ ಸಾಧನೆ ಬ್ರಹ್ಮಕಲಶೋತ್ಸವದಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಇಂತಹ ಕಲಾಪ್ರತಿಭೆಗಳಿಗೆ ಮಹಾಲಿಂಗೇಶ್ವರ ದೇವರು ತಂಡಕ್ಕೆ ಒಳಿತನ್ನು ಮಾಡಲಿ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು, ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಹೇಳಿದರು.
ಅಜಿಲಸೀಮೆಗೆ ಒಳಪಟ್ಟ ಇತಿಹಾಸ ಪ್ರಸಿದ್ಧ ದ.ಕ. ಜಿಲ್ಲೆಯ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. ೧೯ರಿಂದ ೨೭ರವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಜರುಗಲಿದ್ದು, ಫೆ. ೨೧ರಂದು ಬೆಂಗಳೂರಿನ ಖ್ಯಾತ ನೃತ್ಯ ತಂಡದಿಂದ ನಡೆದ ಅಂತರಾಷ್ಟ್ರೀಯ ಮಟ್ಟದ ಮಿರಕಲ್ ಆನ್ ವೀಲ್ಸ್ ನೃತ್ಯ ಪ್ರದರ್ಶನದ ತಂಡವನ್ನು ಉದ್ದೇಶಿಸಿ ಮಾತನಾಡಿದರು.
ವೀಲ್ಚೆಯರ್ನಲ್ಲಿ ತಂಡ ಮಾಡಿದ ಅತ್ಯದ್ಭುತ ನೃತ್ಯವನ್ನು ಸಾವಿರಾರು ಮಂದಿ ಕಲಾ ಪ್ರೇಕ್ಷಕರು ವೀಕ್ಷಿಸಿದರು. ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬೆಂಗಳೂರಿನ ಉದ್ಯಮಿ ಅಶ್ವಥ್ ಹೆಗ್ಡೆ ವಹಿಸಿದ್ದರು.