ಮಂಗಳೂರು: ಕಾಂಗ್ರೆಸ್ ಪಕ್ಷದ `ಕರಾವಳಿ ಧ್ವನಿ’ ಯಾತ್ರೆ ಮಾ.2ರಂದು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸಂಚರಿಸಲಿದ್ದು, ಅಂದು ಸುರತ್ಕಲ್ ಮತ್ತು ಗುರುಪುರ ಬ್ಲಾಕ್ಗಳಲ್ಲಿ ಯಾತ್ರೆ, ಬಹಿರಂಗ ಸಮಾವೇಶ ನಡೆಯಲಿದೆ. ಬಹಿರಂಗ ಸಭೆಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸಲಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುಪುರ ಬ್ಲಾಕ್ನ ಬಹಿರಂಗ ಸಮಾವೇಶ ಮಾ.2ರಂದು ಬೆಳಗ್ಗೆ 10 ಗಂಟೆಗೆ ಗುರುಪುರ ಕೈಕಂಬದ ಮೇಘಾ ಪ್ಲಾಝಾದಲ್ಲಿ ನಡೆಯಲಿದೆ. ಇದರಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ, ಸಲಿಂ ಅಹಮ್ಮದ್ ಮತ್ತಿತರ ನಾಯಕರು ಭಾಗವಹಿಸುತ್ತಾರೆ. ಸಂಜೆ 5 ಗಂಟೆಗೆ ಸುರತ್ಕಲ್ ಬ್ಲಾಕ್ಗೆ ಸಂಬಂಧಿಸಿದ ಬಹಿರಂಗ ಸಮಾವೇಶ ಕೃಷ್ಣಾಪುರದ ಪ್ಯಾರಡೈಸ್ ಗ್ರೌಂಡ್ನಲ್ಲಿ ನಡೆಯಲಿದ್ದು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭಾಗಿಯಾಗಲಿದ್ದಾರೆ ಎಂದರು. ಈಗಾಗಲೇ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಧ್ವನಿ ಯಾತ್ರೆ ನಡೆದಿದೆ. ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಯಾತ್ರೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭಗೊಳ್ಳಲಿದೆ ಎಂದು ಬಾವ ಹೇಳಿದರು.
ಅಭ್ಯರ್ಥಿ ಆಯ್ಕೆಗೆ ಅಂತಿಮ ಸಮೀಕ್ಷೆ: ಪಕ್ಷದ ಅಭ್ಯರ್ಥಿ ಆಯ್ಕೆಯ ಮೂರನೇ ಸಮೀಕ್ಷೆ ಅಂತಿಮ ಹಂತದಲ್ಲಿದೆ. ಸಮೀಕ್ಷೆಯ ವರದಿಯಂತೆ ಆಯ್ಕೆ ನಡೆಯಲಿದ್ದು, 15 ದಿನದೊಳಗೆ ಘೋಷಣೆ ನಿರೀಕ್ಷೆಯಿದೆ. ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲಾಗುವುದು, ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು. ಪಕ್ಷದ ಪ್ರಮುಖರಾದ ಶಶಿಧರ ಹೆಗ್ಡೆ, ಸುರೇಂದ್ರ ಕಂಬಳಿ, ಕವಿತಾ ಸನಿಲ್, ಪುರುಷೋತ್ತಮ ಚಿತ್ರಾಪುರ, ಅಲ್ತಾಫ್, ಅನಿಲ್ ಕುಮಾರ್, ನೀರಜ್ ಪಾಲ್ ಇದ್ದರು