ಉಜಿರೆ: ವಿಭಿನ್ನವಾಗಿ ಆಲೋಚಿಸುವ ಸಾಮರ್ಥ್ಯ ಮತ್ತುಕೌಶಲ್ಯಪೂರ್ಣಅಭಿವ್ಯಕ್ತಿಯ ಮಾದರಿಗಳೊಂದಿಗೆ ಗುರುತಿಸಿಕೊಂಡಾಗ ಮಾತ್ರ ಮಾಧ್ಯಮ ರಂಗ ನಿರೀಕ್ಷಿಸುವ ಸೃಜನಶೀಲತೆಯನ್ನು ರೂಪಿಸಿಕೊಳ್ಳಲು ಸಾಧ್ಯಎಂದು ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ, ಕಂಟೆಂಟ್ ಬರಹಗಾರ್ತಿ ಬಿ.ಕೆ ಸುಮತಿ ಅಭಿಪ್ರಾಯ ಪಟ್ಟರು.
ಉಜಿರೆಯ ಶ್ರೀ.ಧ.ಮಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ರೇಡಿಯೋ ಬರಹ ಮತ್ತು ನಿರೂಪಣಾ ಕ್ರಮಗಳ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಧ್ಯಮಗಳಲ್ಲಿದ್ದಾಗ ಉದ್ದೇಶಿತ ಸಮೂಹದ ಬಗ್ಗೆ ಸಂಪೂರ್ಣವಾಗಿ ಅರಿತಿರಬೇಕು. ಸಮೂಹದ ಆದ್ಯತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಬೆಳವಣಿಗೆಯ ಮಾದರಿಗಳನ್ನು ಕಟ್ಟಿಕೊಡುವುದರ ಕಡೆಗೆ ಗಮನವಿರಬೇಕು. ವಿಶಿಷ್ಠವಾಗಿ ಅಭಿವ್ಯಕ್ತಿಸುವ ಕೌಶಲ್ಯದ ಮೂಲಕ ಮಾಧ್ಯಮ ವೃತ್ತಿಪರತೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೃಜನಶೀಲತೆಯನ್ನು ನಿರಂತರ ಶ್ರದ್ಧೆಯ ಮೂಲಕ ಕಂಡುಕೊಳ್ಳಬಹುದು. ಹೊಸದಾಗಿ ಯೋಚಿಸುತ್ತ ಹೋದಾಗ ಮಾತ್ರ ಸೃಜನಶೀಲತೆ ಸಾಧ್ಯವಾಗುತ್ತದೆ. ಆಯಾ ಮಾದ್ಯಮಗಳ ತಾಂತ್ರಿಕ ವ್ಯಾಕರಣಕ್ಕೆಅನುಗುಣವಾಗಿ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಮಾಧ್ಯಮ ವೃತ್ತಿಪರತೆಯ ಸೃಜನಶೀಲತೆಯು ವಿಸ್ತಾರಗೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ. ಹಂಪೇಶ್ ಮಾತನಾಡಿದರು. ಮಾಧ್ಯಮಗಳಲ್ಲಿ ಅನಿರೀಕ್ಷಿತವಾಗಿ ಬರುವಂತಹ ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಮನಸ್ಥಿತಿಯೊಂದಿಗೆ ವಿದ್ಯಾರ್ಥಿಗಳು ಪೂರ್ವತಯಾರಿ ನಡೆಸಬೇಕು ಎಂದರು.
ಕಾರ್ಯಕ್ರಮವನ್ನು ವಿಜಯ್ ಹಿರೇಮಠ್ ಸ್ವಾಗತಿಸಿ, ರಕ್ಷಿತಾ ವಂದಿಸಿ, ಶಿವಕುಮಾರ್ ನಿರೂಪಿಸಿದರು.