ಸುಳ್ಯ: ಸುಳ್ಯ ಸಮೀಪದ ಅಡ್ಕಾರಿನ ಬಳಿ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಪ್ರಕರಣದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದ ಬೆನ್ನಲ್ಲೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿಯೂ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.
ಇಂದು (ಗುರುವಾರ) ಬೆಳ್ಳಂ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಸಾವಿಗೀಡಾಗಿದ್ದರು. ಮತ್ತೋರ್ವನ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದರೆ ಅವರು ಕೂಡ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಮೃತರ ಸಂಖ್ಯೆ ಮೂರಕ್ಕೇರಿದಂತಾಗಿದೆ. ಇನ್ನೋರ್ವ ಸಣ್ಣ ಪುಟ್ಟ ಗಾಯಗಳಿಂದ ಪ್ರಣಾಪಾಯದಿಂದ ಪಾರಾಗಿದ್ದು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ನಿವಾಸಿಗಳು ಕೂಲಿ ಕೆಲಸವನ್ನು ಅರೆಸಿಕೊಂಡು ಬಂದಿದ್ದರು. ಗುರುವಾರ ಅಡ್ಕಾರಿಗೆ ಬಂದು ರಾತ್ರಿ ಅಲ್ಲಿಯೇ ತಂಗಿದ್ದರು. ಇಂದು ಬೆಳಗ್ಗೆ ನಾಲ್ಕು ಮಂದಿ ಕಾರ್ಮಿಕರು ರಸ್ತೆ ಬದಿ ನಿಂತಿದ್ದರು. ಈ ವೇಳೆ ರಭಸದಿಂದ ಬಂದ ಕಾರೊಂದು ಕಾರ್ಮಿಕರ ಮೇಲೆ ನುಗ್ಗಿ ಬಂದಿದೆ.
ಘಟನೆಯಲ್ಲಿ ನಾಲ್ಕವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದೆ. ಕಾರು ನಾಲ್ವರಿಗೆ ಗುದ್ದಿದ್ದಲ್ಲದೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೂ ಗುದ್ದಿದೆ. ಕಾರು ಚಾಲಕ ಅತ್ಯಂತ ವೇಗದಿಂದ ಚಾಲನೆ ಮಾಡಿಕೊಂಡು ಬಂದಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.