News Karnataka Kannada
Monday, April 29 2024
ಮಂಗಳೂರು

ಚಾರ್ಮಾಡಿ ಜಾರುವ ರಸ್ತೆಗೆ ಕಾಯಕಲ್ಪ ನೀಡಲು ಮುಂದಾದ ಇಲಾಖೆ

The department has come forward to lay the charmadi slippery road
Photo Credit : News Kannada

ಚಾರ್ಮಾಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಪೇಟೆ ಪರಿಸರದಲ್ಲಿ ಸುಮಾರು 3ಕಿಮೀ ಪ್ರದೇಶದ ರಸ್ತೆಯ ಡಾಮಾರಿಕರಣ ಅವೈಜ್ಞಾನಿಕವಾಗಿ ಮಾಡಲಾಗಿದ್ದು ಇದರಿಂದ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಹಲವು ವಾಹನಗಳು ಮಗುಚಿ ಬೀಳುತ್ತಿವೆ.ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಲ್ಲಿ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರಸ್ತೆಯನ್ನು ಒರಟು ಮಾಡುವ ಕ್ರಮ ಕೈಗೊಂಡಿದೆ.

2019ರ ಭೀಕರ ಮಳೆ ಹಾಗೂ ಪ್ರವಾಹದಲ್ಲಿ ಚಾರ್ಮಾಡಿ ಘಾಟಿ ಸೇರಿದಂತೆ ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿತ್ತು.ಇದರಿಂದ ಚಾರ್ಮಾಡಿ ಘಾಟಿ ಸಂಚಾರಕ್ಕೂ ಹಲವು ಕಾಲ ನಿಷೇಧ ಹೇರಲಾಗಿತ್ತು. ಚಾರ್ಮಾಡಿ ಹಳ್ಳದಿಂದ ಚಾರ್ಮಾಡಿ ಘಾಟಿ ಪ್ರದೇಶದ ರಸ್ತೆಯನ್ನು ಅಭಿವೃದ್ಧಿಪಡಿಸಿದ ಬಳಿಕ ಜಿಲ್ಲಾಡಳಿತವು ಹಂತ ಹಂತವಾಗಿ ಸಂಚಾರ ನಿಷೇಧವನ್ನು ಹಿಂಪಡೆದಿತ್ತು.

ಚಾರ್ಮಾಡಿ ಹಳ್ಳದಿಂದ ಚಾರ್ಮಾಡಿ ಘಾಟಿ ಪರಿಸರದ 3 ಕಿಮೀ. ವ್ಯಾಪ್ತಿಯಲ್ಲಿ ಹಾಕಿರುವ ಡಾಮರು ವಿಪರೀತ ನಯವಾಗಿದ್ದು ಮಳೆ ಬಿದ್ದೊಡನೆ ವಾಹನಗಳು ಹತೋಟಿಗೆ ಸಿಗದೇ ಹಲವಾರು ಅಪಘಾತಗಳು ಈ ಪರಿಸರದಲ್ಲಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡಿದ್ದರು. ಈ ರಸ್ತೆ ಮಳೆಗೆ ಎಷ್ಟು ಜಾರುತ್ತಿದೆ ಎಂದರೆ ಇದರ ಮೇಲೆ ಪಾದಾಚಾರಿಗಳು ನಡೆದಾಡಲು ಕೂಡ ಹಿಂಜರಿಯುವ ಸ್ಥಿತಿ ಇದೆ. ಈ ವರ್ಷ ಸುಮಾರು ಒಂದು ತಿಂಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ವಾಹನಗಳು ಈ ಪ್ರದೇಶದಲ್ಲಿ ಉರುಳಿ ಬಿದ್ದು ರಸ್ತೆಯು ವಾಹನ ಸವಾರರಿಗೆ ಸಿಂಹ ಸ್ವಪ್ನವಾಗಿತ್ತು.

ಇಲಾಖೆಯಿಂದ ಕ್ರಮ:
ಇಲ್ಲಿ ಅಪಘಾತಗಳ ಸರಣಿ ಮುಂದುವರೆಯುತ್ತಿದ್ದಂತೆ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈ ಪ್ರದೇಶದಲ್ಲಿ ರಸ್ತೆಯ ಡಾಮಾರಿನ ಮೇಲೆ ಜೆಸಿಬಿ ಮೂಲಕ ಅಲ್ಲಲ್ಲಿ ಒರಟು ಗೆರೆಗಳನ್ನು ಎಳೆಯುವ ಕೆಲಸ ಆರಂಭಿಸಿದೆ. ಡಾಮಾರನ್ನು ಅಲ್ಲಲ್ಲಿ ಸಣ್ಣದಾಗಿ ಕೊರೆದು ರಸ್ತೆಯನ್ನು ಒರಟು ಮಾಡಲಾಗುತ್ತಿದೆ. ಇದು ಈ ರಸ್ತೆಯ ಪರಿಸ್ಥಿತಿ ಗೊತ್ತಿಲ್ಲದೆ ಅಮಿತ ವೇಗದಲ್ಲಿ ಆಗಮಿಸಿ ಏಕಾಏಕಿ ಬ್ರೇಕ್ ಅದುಮಿದಾಗ ವಾಹನಗಳು ಹತೋಟಿಗೆ ಸಿಗದೆ ಮಗುಚಿ ಬೀಳುವುದನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ಸ್ಥಳೀಯರಲ್ಲಿ ಸಮಾಧಾನ:
ಇಲ್ಲಿನ ಜಾರುವ ರಸ್ತೆಗೆ ಕಾಯಕಲ್ಪ ನೀಡಲು ಸ್ಥಳೀಯರು ಇಲಾಖೆ, ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದುವರೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಅಪಘಾತ ಸರಣಿಯಿಂದ ಬೇಸತ್ತು ಪ್ರತಿಭಟನೆ ನಡೆಸುವ ಕುರಿತು ಯೋಚಿಸಿದ್ದರು.ಸದ್ಯ ಸ್ಥಳೀಯರಲ್ಲಿ ಇಲಾಖೆಯ ಈ ಕ್ರಮ ಸಮಾಧಾನ ಮೂಡಿಸಿದೆ.

“ಪ್ರಸ್ತುತ ಮಳೆ ಇರುವ ಕಾರಣ ರಸ್ತೆಯನ್ನು ಜೆಸಿಬಿ ಮೂಲಕ ಒರಟು ಮಾಡಲಾಗುತ್ತಿದೆ. ಅಗತ್ಯ ಸ್ಥಳಗಳನ್ನು ಗುರುತಿಸಿ ಈ ಕೆಲಸ ಮುಂದುವರಿಯಲಿದೆ. ಮಳೆಗಾಲದ ಬಳಿಕ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು”
-ಮಹಾಬಲ ನಾಯ್ಕ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದಕ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು