ಮಂಗಳೂರು: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪೊಕ್ಸೊ ಪ್ರಕರಣದ ಪೊಲೀಸ್ ತನಿಖೆಯಲ್ಲಿ ಲೋಪವಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆ ಹಾಗೂ ಜಿಲ್ಲಾಡಳಿತ ಪ್ರಕರಣದ ಸೂಕ್ತ ತನಿಖೆಗೆ ಕ್ರಮ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟೆಣ್ಣನವರ್ ಆಗ್ರಹಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಪೊಕ್ಸೊ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯು ದೂರಿನಲ್ಲಿ ಉಲ್ಲೇಖಿಸಿರುವ ಆರೋಪಿಯನ್ನು ಪೊಲೀಸರು ಮರೆ ಮಾಡಿದ್ದಾರೆ. ಆದ್ದರಿಂದ ತಕ್ಷಣ ಸಂರಕ್ಷಣಾ ಅಧಿಕಾರಿಯನ್ನು ನೇಮಿಸಿ ಪ್ರಕರಣದ ಕೂಲಂಕಷ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಬಾಲಕಿ ಪ್ರಥಮವಾಗಿ ನೀಡಿರುವ ಹೇಳಿಕೆಯು ಮಹತ್ವವಾಗಿದೆ. ಆದರೆ, ಇದೀಗ ಪೊಲೀಸರು ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಯೂಟ್ಯೂಬ್ ಚಾನೆಲ್ ಒಂದು ನಡೆಸಿರುವ ಮಾಧ್ಯಮ ವಿಚಾರಣೆಯಲ್ಲಿ ಸಂತ್ರಸ್ತೆ ಹಾಗೂ ಆಕೆಯ ತಾಯಿಯ ಬಗ್ಗೆ ತಪ್ಪುಗ್ರಹಿಕೆ ಬರುವ ರೀತಿಯಲ್ಲಿ ಆಪಾದಿಸಲಾಗಿದೆ.
ತಡರಾತ್ರಿ 11.30ರ ವರೆಗೆ ಎಸ್ಪಿಯವರ ಸಮ್ಮುಖದಲ್ಲಿಯೇ ಸಂತ್ರಸ್ತೆ ಹಾಗೂ ತಾಯಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಪೊಕ್ಸೊ ಪ್ರಕರಣದಲ್ಲಿ ಈ ರೀತಿ ವಿಚಾರಣೆ ಮಾಡುವಂತಿಲ್ಲ. ಅದಲ್ಲದೆ, ಸಂತ್ರಸ್ತೆಯನ್ನು ರಾತ್ರಿ ಹೊತ್ತು ಠಾಣೆಗೆ ಕರೆಸಿಕೊಂಡು ವಿಚಾರಣೆ ಮಾಡುವ ಅವಕಾಶವೂ ಪೊಕ್ಸೊ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಸಂತ್ರಸ್ತೆಗೆ ನ್ಯಾಯ ದೊರಕುವುದರೊಂದಿಗೆ ನೈಜ ಆರೋಪಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಗಿರೀಶ್ ಮಟ್ಟೆಣ್ಣನವರ್ ಒತ್ತಾಯಿಸಿದರು.