ಪುತ್ತೂರು: ಶ್ರೀರಾಮ, ಸೀತಾಮಾತೆ ಹಾಗೂ ಹನುಮಂತ ದೇವರ ಮೇಲೆ ಅವಹೇಳನ ಮಾಡಿದೆ ಎಂಬ ಆರೋಪವನ್ನು ಸಮರ್ಪಕವಾಗಿ ತನಿಖೆ ನಡೆಸಿ 48 ಗಂಟೆಯೊಳಗೆ ನಿಜವಾದ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ `ಹನುಮಭಕ್ತೆ’ಯಾಗಿರುವ ತಾನು ಪುತ್ತೂರು ನಗರ ಪೊಲೀಸ್ ಠಾಣೆ ಎದುರು `ಆರೆಸ್ಟ್ ಮಿ’ ಫಲಕ ಹಿಡಿದು ಧರಣಿ ನಡೆಸುವುದಾಗಿ ರಾಜ್ಯ ಮಹಿಳಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರ್ನಾಥ್ ತಿಳಿಸಿದ್ದಾರೆ.
ಪುತ್ತೂರು ಬಪ್ಪಳಿಗೆಯ ತನ್ನ ನಿವಾಸದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಈಗಾಗಲೇ `ಕ್ಲಬ್ ಹೌಸ್’ ಚರ್ಚೆಯನ್ನು ತಿರುಚಿ ಪ್ರಸಾರ ಮಾಡಿದ ವಿಕ್ರಮ ಯುಟ್ಯೂಬ್ ಚಾನೆಲ್ ನ ಮುಮ್ತಾಜ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ. ತನ್ನ ಮನೆಯ ಮೇಲೆ ಧಾಳಿ ಮಾಡಿದ ತಂಡದ ವಿರುದ್ಧವೂ ದೂರು ನೀಡಿದ್ದೇನೆ. ಆದರೆ ಪೊಲೀಸರಿಂದ ಯಾವುದೇ ಪ್ರಕರಣದಲ್ಲಿಯೂ ಆರೋಪಿಗಳನ್ನು ಬಂಧಿಸುವ ಕೆಲಸ ನಡೆದಿಲ್ಲ. ಎಡಿಟೆಡ್ ವೀಡಿಯೊ ಪ್ರಸಾರ ಮಾಡಿದ ಮುಮ್ತಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. `ಕ್ಲಬ್ ಹೌಸ್’ ಅಸಲಿ ಆಡಿಯೋ ಯನ್ನು ಪರಿಶೀಲನೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು.
ಈ ನಡುವೆ ಬಿಜೆಪಿ ಪಕ್ಷದ ಆಫಿಷಿಯಲ್ ಪೇಜ್ ನಲ್ಲಿಯಲ್ಲಿಯೂ ತಿರುಚಲಾದ ಈ ವಿಡಿಯೊ ಹಾಕಲಾಗಿದೆ. ಹೆಣ್ಣು ಮಕ್ಕಳಿಗೆ ಗೌರವ ನೀಡುವುದಾಗಿ ಹೇಳುವ ಹಿಂದೂ ಪರ ಎಂದು ಹೇಳುತ್ತಿರುವ ಬಿಜೆಪಿ ಪಕ್ಷದ ಆಡಳಿತದಲ್ಲಿ ಯಾವ ಮಹಿಳೆಗೂ ರಕ್ಷಣೆ ಇಲ್ಲ ಎಂಬುವುದನ್ನು ಈ ಮೂಲಕ ಸಾಬೀತು ಮಾಡಿದೆ. ಹಿಂದೂ ಪರ ಸಂಘಟನೆಗಳನ್ನು ಹಿಂದೂ ಮಹಿಳೆಯ ಮೇಲೆ ಎತ್ತಿಕಟ್ಟುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ನಾನು ದೇವರ ಭಕ್ತೆಯಾಗಿದ್ದು, ಯಾವುದೇ ಕಾರಣಕ್ಕೂ ದೇವರಿಗೆ ಅವಹೇಳನ ಮಾಡುವ ಹೆಣ್ಣು ಮಗಳಲ್ಲ. ಶ್ರೀರಾಮ ಸೀತೆ, ಪುತ್ತೂರು ಮಹಾಲಿಂಗೇಶ್ವರ ದೇವರ ಸಹಿತ ಎಲ್ಲಾ ದೇವರುಗಳನ್ನು ನಂಬುವ ಹಾಗೂ ಹಿಂದೂ ಸಂಪ್ರದಾಯ-ಧಾರ್ಮಿಕ ಆಚರಣೆಗಳನ್ನು ಪಾಲಿಸುವ ಮಹಿಳೆಯಾಗಿದ್ದೇನೆ. ನಾನು ಹಿಂದು ಅನ್ನುವುದಕ್ಕೆ ಯುಟ್ಯೂಬ್ ಚಾನೆಲ್, ಹಿಂದೂ ಪರಸಂಘಟನೆಗಳ ಸರ್ಟಿಫಿಕೇಟ್ ಬೇಕಾಗಿಲ್ಲ.
ನಾನು ಅಧರ್ಮಿ ಅಲ್ಲ..ಅಲ್ಲ..ಅಲ್ಲ…
ಬಿಜೆಪಿ ಧರ್ಮದ ಹೆಸರಲ್ಲಿ ಅಧರ್ಮ ಮಾಡುತ್ತಿದೆ. ಆದರೆ ನಾನು ಅಧರ್ಮಿ ಅಲ್ಲ. ಬಿಜೆಪಿ ಓಟು ಗಿಟ್ಟಿಸುವ ನಿಟ್ಟಿನಲ್ಲಿ ಹಿಂದೂಪರ ಸಂಘಟನೆಗಳನ್ನು ತನ್ನ ವಿರುದ್ಧ ಎತ್ತಿಕಟ್ಟಿದೆ. ಬಿಜೆಪಿ ದುರಾಡಳಿತ ವಿರುದ್ಧ ಧ್ವನಿ ಎತ್ತುವ ಹಿನ್ನಲೆಯಲ್ಲಿ ನಾನು ಕಾಂಗ್ರೇಸ್ ಪಕ್ಷಕ್ಕೆ ಸೇರಿದವಳು. ಇದೀಗ ಬಿಜೆಪಿ ಈ ಹಿನ್ನಲೆಯಲ್ಲಿ ಮಹಿಳೆಯೊಬ್ಬಳಿಗೆ ಟಾರ್ಚರ್ ನೀಡುವ ಕೆಲಸ ಮಾಡುತ್ತಿದೆ. ಒಂದು ವೇಳೆ ನನ್ನನ್ನು ಕೊಂದರೆ `ಹಿಂದೂ ದ್ರೋಹಿ’ ಗಳಿಂದ ಹಿಂದೂ ಮಹಿಳೆಯ ಕೊಲೆ ಎಂದು ವರದಿ ಮಾಡಿ ಎಂದರು.
ಶಾಸಕರೇ ಕ್ಷಮೆ ಯಾಚಿಸಬೇಕು..
ನೀವು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಶಾಸಕರು ಹೇಳಿಕೆ ನೀಡಿದ್ದಾರೆ ಅನ್ನುವ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು ಶಾಸಕರ ಕ್ಷೇತ್ರದ ವ್ಯಾಪ್ತಿಯ ಮಹಿಳೆಯೊಬ್ಬಳ ತೇಜೋವಧೆ ಮಾಡುತ್ತಿರುವಾಗ ಸೂಕ್ತ ಭದ್ರತೆ ಒದಗಿಸದ, ನ್ಯಾಯವಾದಿ ಮಹಿಳೆಯೊಬ್ಬರ ಮನೆಯ ಮೇಲೆ ತಂಡವೊಂದು ದಾಳಿ ನಡೆಸಿದಾಗ ರಕ್ಷಣೆ ಒದಗಿಸುವ ಜವಾಬ್ದಾರಿ ಹೊರದ ಶಾಸಕರೇ ಕ್ಷಮಾಯಾಚನೆ ಮಾಡಬೇಕು. ನಾನು ಯಾವುದೇ ದೇವರಿಗೆ ಅವಹೇಳನ ಮಾಡಿಲ್ಲ. ನನಗೆ ದೇವರ ಬೆಂಬಲ ಇದೆ. ಶ್ರೀರಾಮಚಂದ್ರನೇ ನನ್ನನ್ನು ರಕ್ಷಿಸುತ್ತಾನೆ ಎಂದು ಅವರು ಹೇಳಿದರು.