News Karnataka Kannada
Monday, April 29 2024
ಮಂಗಳೂರು

ಡಾ.ಡಿ.ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬ ಪ್ರಯುಕ್ತ ವಿದ್ಯಾರ್ಥಿವೇತನ ವಿತರಣೆ

Scholarships distributed on the occasion of Dr. D. Veerendra Heggade's birth anniversary
Photo Credit : News Kannada

ಉಜಿರೆ : ಸರ್ಕಾರವೂ ಸೇರಿದಂತೆ ವಿವಿಧ ವಲಯಗಳು ಅನುಕರಿಸಬಹುದಾದಂತಹ ಅಭಿವೃದ್ಧಿಯ ವಿನೂತನ ಮಾದರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಉದಯವಾಣಿ ದಿನಪತ್ರಿಕೆಯ ಕುಂದಾಪುರ ವಿಭಾಗದ ಪ್ರಧಾನ ಉಪ ವರದಿಗಾರ ಲಕ್ಷ್ಮೀ ಮಚ್ಚಿನ ಅಭಿಪ್ರಾಯಪಟ್ಟರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಜನ್ಮದಿನದ ಪ್ರಯುಕ್ತ ಶನಿವಾರ (ನ.25)ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನಿಡಿದರು.

ಭವಿಷ್ಯದ ಬದಲಾವಣೆಯ ಸಾಧ್ಯತೆಗಳನ್ನು ನಿಖರವಾಗಿ ಕಂಡುಕೊಂಡು ಅದಕ್ಕನುಗುಣವಾದ ಅಭಿವೃದ್ದಿಯ ಯೋಜನೆಗಳನ್ನು ವೀರೇಂದ್ರ ಹೆಗ್ಗಡೆ ಅವರು ಅನುಷ್ಠಾನಕ್ಕೆ ತಂದರು. ಸ್ವಸಹಾಯ ಸಂಘಗಳ ರಚನೆ, ಸ್ವಯಂ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಬೇಕಾಗುವ ಸಕಾಲಿಕ ಮಾರ್ಗದರ್ಶನ, ಯುವಸಮೂಹಕ್ಕೆ ವೃತ್ತಿಪರ ತರಬೇತಿ ಒದಗಿಸುವ ವಿಶೇಷ ಪರಿಕಲ್ಪನೆಗಳು ಮತ್ತು ಕೆರೆ ಸಂರಕ್ಷಣೆಯ ಕೈಂಕರ್ಯಗಳ ಮೂಲಕ ಅವರು ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾದರಿಗಳನ್ನು ರೂಪಿಸಿದ್ದಾರೆ. ಇಂಥ ಅಭಿವೃದ್ಧಿಯ ಹೆಜ್ಜೆಗಳೊಂದಿಗೆ ಗುರುತಿಸಿಕೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು ತನ್ನ ಸಮಾಜಮುಖಿ ಕಾರ್ಯಗಳಿಂದ ನಾಡಿನೆಲ್ಲೆಡೆ ಪ್ರಸಿದ್ಧವಾಗಿದೆ ಎಂದು ಹೇಳಿದರು.

ವೀರೇಂದ್ರ ಹೆಗ್ಗಡೆ ಅವರು ಚಿಕ್ಕ ವಯಸ್ಸಿನಲ್ಲಿಯೇ ಶ್ರೀಕ್ಷೇತ್ರದ ಆಡಳಿತದ ಚುಕ್ಕಾಣಿಯನ್ನು ಹಿಡಿದವರು. ಅನುಭವ ಮತ್ತು ದೂರದರ್ಶಿತ್ವದೊಂದಿಗೆ ಹತ್ತಾರು ಸಂಘ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ಜನರಿಗೆ ಸ್ವಾವಲಂಬಿ ಬದುಕನ್ನು ರೂಪಿಸಿದ್ದಾರೆ. ಸ್ವಸಹಾಯ ಸಂಘಗಳನ್ನು ಹುಟ್ಟುಹಾಕುವ ಮೂಲಕ ಅಸಂಖ್ಯಾತ ಮಹಿಳೆಯರನ್ನು ಮುಖ್ಯ ವೇದಿಕೆಗೆ ತಂದಿದ್ದಾರೆ. ಕಲೆ-ಸಾಹಿತ್ಯ, ಸಂಸ್ಕೃತಿ, ಶಿಕ್ಷಣ , ಆರೋಗ್ಯ ಇತ್ಯಾದಿ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ನಿಸ್ವಾರ್ಥವಾಗಿ ಪರರ ಏಳಿಗೆಗಾಗಿ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಪರಮಪೂಜ್ಯ ಹೆಗ್ಗಡೆಯವರು ಬಡವರ ಬದುಕಿಗೆ ಚೈತನ್ಯದ ಬೆಳಕು ಎಂದರು.

ಉಜಿರೆಯ ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳು ಪ್ರತಿಭೆಯನ್ನು ವಿದ್ಯೆ ಜೊತೆ ಬೆರೆಸಿಕೊಂಡು ವಿಚಾರವಂತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಹೆಗ್ಗಡೆಯವರ ಸಾಧನೆಗಳವಿಶ್ವರೂಪ ಹಾಡನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಉಜಿರೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ. ಉಪಸ್ಥಿತರಿದ್ದರು. ಉಪನ್ಯಾಸಕರಾದ ದೀಕ್ಷಿತ್ ರೈ ಹಾಗು ಮಹಾವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿ ವೇತನ ವಿತರಣೆ :

ಡಾ. ಡಿ. ವೀರೇಂದ್ರ ಹೆಗಡೆ ಜನ್ಮ ಸಂಭ್ರಮಾಚರಣೆಯ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶೇ.95ಕ್ಕಿಂತ ಮೇಲ್ಪಟ್ಟ ಅಂಕಗಳನ್ನು ಗಳಿಸಿದ 69 ವಿದ್ಯಾರ್ಥಿಗಳಿಗೆ ಒಟ್ಟು 15,15,100 ರೂ.ಮೊತ್ತವನ್ನು ನೀಡಲಾಯಿತು. ಉಜಿರೆ ಶ್ರೀ.ಧ.ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ವಿದ್ಯಾರ್ಥಿಗಳಿಗೆ ಚೆಕ್ ನೀಡಿ ಶುಭ ಹಾರೈಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು