ಪುತ್ತೂರು: ಬರ್ಬರವಾಗಿ ಕೊಲೆಗೀಡಾಗಿರುವ ಬಿಜೆಪಿ ಯುವಮೋರ್ಛಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್ ಅವರ ಮೃತದೇಹದ ಅಂತಿಮ ದರ್ಶನದ ವೇಳೆ ಬೆಳ್ಳಾರೆಗೆ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಬಂದಿಳಿಯುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಧಿಕ್ಕಾರ ಕೂಗಿದ ಘಟನೆ ನಡೆಯಿತು.
ಮಧ್ಯಾಹ್ನ 1 ಗಂಟೆಗೆ ಶವ ಯಾತ್ರೆ ಬೆಳ್ಳಾರೆ ತಲುಪಿ ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಂದರ್ಭ ಈ ಘಟನೆ ನಡೆಯಿತು. ಸಂಸದರು, ಸಚಿವರನ್ಬು ಒಂದಿಂಚೂ ಕದಲಲು ಬಿಡದೆ, ಮಾತನಾಡಲೂ ಬಿಡದೆ ದಿಗ್ಬಂಧನ ವಿಧಿಸಿದ ಪಕ್ಷ, ಹಿಂದುತ್ವಪರ ಸಂಘಟನೆಯ ಕಾರ್ಯಕರ್ತರು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಕೊಲೆ ಘಟನೆ ನಿನ್ನೆ ರಾತ್ರಿ ನಡೆದಿದ್ದರೂ ಸರಕಾರದ ಪ್ರತಿನಿಧಿಗಳು ಯಾರೂ ಬಂದಿಲ್ಲ. ಈಗ ಕೊನೆ ಕ್ಷಣದಲ್ಲಿ ಯಾವ ಪುರುಷಾರ್ಥಕ್ಕೆ ಬಂದಿದ್ದೀರಿ? ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಗೆಡಹಿದರು. ಸಂಸದರು, ಸಚಿವರು ಎಷ್ಟು ಸಮಧಾನ ಪಡಿಸಲು ಯತ್ನಿಸಿದರೂ ಕಾರ್ಯಕರ್ತರ ರೋಷ ಮಣಿಯಲಿಲ್ಲ. ಈ ಸಂದರ್ಭ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ
ಪಾರ್ಥಿವ ಶರೀರವನ್ನು ಮೃತರ ಮನೆಗೆ ಕೊಂಡೊಯ್ದ ಮೇಲೂ ಜನಪ್ರತಿನಿಧಿಗಳಿಗೆ ಕಾರ್ಯಕರ್ತರ ದಿಗ್ಬಂಧನ ಮುಂದುವರಿದಿತ್ತು. ಈ ವೇಳೆ ಆಕ್ರೋಶಿತ ಕಾರ್ಯಕರ್ತರನ್ನು ಚದುರಿಸಲು ಬೆಳ್ಳಾರೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.