ಮಂಗಳೂರು: ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ನೀಚ ಬುದ್ದಿಯ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ನಳಿನ್ ಅವರ ಭಾವನಾತ್ಮಕ ನಾಟಕಕ್ಕೆ ರಾಜ್ಯದ ಜನ ಬುದ್ದಿ ಕಲಿಸಿದ್ದಾರೆ. ಬಿಜೆಪಿಯವರ ಜೀವನ ನಡೆಯುವುದು ಕೂಡ ನಮ್ಮ ಗ್ಯಾರಂಟಿ ಯೋಜನೆಗಳ ಮೇಲೆ ಎಂದು ವ್ಯಂಗ್ಯವಾಡಿದರು. ಸದ್ಯ ಮಕ್ಕಳ ಪೌಷ್ಟಿಕತೆಗಾಗಿ ವಾರಕ್ಕೆ ಎರಡು ಬಾರಿ ಮೊಟ್ಟೆ ಕೊಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಸರ್ಕಾರ ಇದನ್ನು ಅನುಷ್ಠಾನ ಮಾಡಿದೆ.
ರಾಜ್ಯದಲ್ಲಿ ಶಿಕ್ಷಕರ ಕೊರತೆ ಇರುವುದು ಸತ್ಯ ಅದನ್ನು ನಾವು ಸರಿಪಡಿಸುತ್ತೇವೆ. ಸಮಸ್ಯೆ ಇದ್ದರೂ ಕೂಡ ದಾಖಲೆ ಪ್ರಮಾಣದಲ್ಲಿ 25 ಸಾವಿರ ಶಿಕ್ಷಕರ ವರ್ಗಾವಣೆ ಆಗಿದೆ. ನಾನು ಅಧಿಕಾರ ಪಡೆದಾಕ್ಷಣ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿದ್ದೇನೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆದಾಗಲಿ ಅಂತ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಲ್ಲಿ ಬಿಜೆಪಿಯವರು ಹೇಳುವಂತೆ ಯಾವುದೇ ಅಜೆಂಡಾ, ರಾಜಕೀಯ ಇಲ್ಲ. ಬಿಜೆಪಿಯವರು ಸಭಾಧ್ಯಕ್ಷರ ಪೀಠವನ್ನೇ ಅವಮಾನಿಸಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ಜನ ನಮ್ಮನ್ನ ಗೆಲ್ಲಿಸುತ್ತಾರೆ. ಕರಾವಳಿ ಭಾಗ ಕಲ್ಮಶ ಆಗಿದ್ದು ನಿಜ, ಆದರೆ ಮತ್ತೆ ಶಾಂತಿ ಸೌಹಾರ್ದತೆ ಬರಲಿದೆ. ನಮ್ಮ ಸರ್ಕಾರ ಅವೆಲ್ಲವನ್ನೂ ಮತ್ತೆ ಮೂಡಿಸಲಿದೆ ಎಂದರು.